ದಲಿತ ಮುಖಂಡರ ವಿರುದ್ಧವೇ ತಿರುಗಿಬಿದ್ದ ದಲಿತರು
ಬುಧವಾರ ಮಂಗಳೂರು ತಾಲೂಕು ಪಂಚಾಯತ್ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ/ ಬಾಲಕಾರ್ಮಿಕ ಅಧಿನಿಯಮ / ಜೀತ ಕಾರ್ಮಿಕರ ಅಧಿನಿಯಮ ಹಾಗೂ ವಿಶೇಷ ಘಟಕಗಳ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಅನುಷ್ಠಾನದ ಕುರಿತ ಉಸ್ತುವಾರಿ ಸಮಿತಿ ಸಭೆ ಆಯೋಜಿಸಲಾಗಿತ್ತು.
ನಿಯಮದಂತೆ ಸಮಿತಿ ಅಧ್ಯಕ್ಷರಾಗಿರುವ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಯಬೇಕು. ಅವರು ಗೈರುಹಾಜರಾದ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರು ಸಭೆಯ ಅಧ್ಯಕ್ಷತೆ ವಹಿಸಬೇಕು. ದುರಂತವೆಂದರೆ, ಅಧಿಕಾರ ಹೊಂದಿದ್ದ ಇಬ್ಬರು ಅಧಿಕಾರಿಗಳೂ ಗೈರು ಹಾಜರಾಗಿದ್ದರು. ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಅವರು ಸಭೆ ನಡೆಸಲು ತಹಶೀಲ್ದಾರ್ ರವಿಚಂದ್ರ ನಾಯಕ್ ಅವರಿಗೆ ಜವಾಬ್ದಾರಿ ನೀಡಿ ಕರ್ತವ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು.
ಬೆಳಗ್ಗೆ 10.30 ಗಂಟೆಗೆ ಸಭೆ ನಡೆಯಬೇಕಿತ್ತು. ಈ ಹೊತ್ತಿಗಾಗಲೇ ಸಭಾಂಗಣದ ಎಲ್ಲಾ ಆಸನಗಳು ಭರ್ತಿಯಾಗುವಷ್ಟು ದೊಡ್ಡ ಪ್ರಮಾಣದಲ್ಲಿ ಪರಿಶಿಷ್ಟರು ಭಾಗವಹಿಸಿದ್ದರು. ತಹಶೀಲ್ದಾರ್ ಅವರು ಸಭೆಗೆ ಬಂದಾಗ ಸುಮಾರು 11.45 ಗಂಟೆ. ಇದರಿಂದ ಆಕ್ರೋಶಗೊಂಡ ದಲಿತ ಪ್ರತಿನಿಧಿಗಳು ಸಭೆ ಬಹಿಷ್ಕರಿಸಿ ಹೊರ ನಡೆದರು. ಪೊಲೀಸ್ ಅಧಿಕಾರಿಗಳು ಭಾಗವಹಿಸಿರಲಿಲ್ಲ. ದಲಿತರ ಕುರಿತು ಅಧಿಕಾರಿಗಳಲ್ಲಿ ಇರುವ ಮನೋಭಾವ ಬದಲಾಗಬೇಕು. ಅಧಿಕಾರಿಗಳ ದಲಿತ ದೌರ್ಜನ್ಯ ನಿಲ್ಲಬೇಕು ಎಂದವರು ಘೋಷಣೆ ಕೂಗಿದರು.
ತಡವಾಗಿ ಬಂದಿರುವುದಕ್ಕೆ ಮುಖಂಡರಲ್ಲಿ ಕ್ಷಮೆ ಯಾಚಿಸಿದ ತಹಶೀಲ್ದಾರ್ ಅವರು, ಮೇಲಾಧಿಕಾರಿ (ಜಿಲ್ಲಾಧಿಕಾರಿ) ಅವರ ಸೂಚನೆಯಂತೆ ಬೆಳಗ್ಗೆ ಉಳಾಯಿಬೆಟ್ಟು ಪ್ರದೇಶಕ್ಕೆ ಸ್ಥಳ ತನಿಖೆಗೆ ತೆರಳಿದ ಕಾರಣ ಬರುವಾಗ ಸ್ವಲ್ಪ ತಡವಾಗಿದೆ ಎಂದು ಮುಖಂಡರನ್ನು ಸಮಾಧಾನಮಾಡಲು ಯತ್ನಿಸಿದರು. ಆದರೆ ದಲಿತ ಮುಖಂಡರು ಮಾತ್ರ ಕಾಟಾಚಾರದ ಉಸ್ತುವಾರಿ ಸಮಿತಿ ಸಭೆ ಬಹಿಷ್ಕರಿಸಿ ಅಲ್ಲಿಂದ ನಿರ್ಗಮಿಸಿದರು.