3 ಗ್ರಾಮೀಣ ಬ್ಯಾಂಕ್ ಗಳ 300 ಅಧಿಕಾರಿಗಳಿಂದ ಧರಣಿ
ಪ್ರೇರಿತ ಕೆನರಾ ಬ್ಯಾಂಕಿನಲ್ಲಿ ಇರುವಂತೆ ಎಲ್ಲಾ ಸೌಲಭ್ಯಗಳು ಗ್ರಾಮಿಣ ಬ್ಯಾಂಕ್ ಉದ್ಯೋಗಿಗಳಿಗೆ ಸಿಗಬೇಕು. ಗ್ರಾಮೀಣ ಬ್ಯಾಂಕಿನ ಉದ್ಯೋಗಿಗಳು ಪ್ರೇರಕ ವಾಣಿಜ್ಯ ಬ್ಯಾಂಕುಗಳ ಉದ್ಯೋಗಿಗಳಿಗೆ ಸಮಾನವಾಗಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಸಮಾನವಾದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಪ್ರೇರಕ ಬ್ಯಾಂಕ್ನ ಉದ್ಯೋಗಿಗಳಿಗೆ ಸಮಾನವಾಗಿ ವೇತನ, ಭತ್ಯೆ ಹಾಗೂ ಇನ್ನಿತರೆ ಸೌಲಭ್ಯಗಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ನ ರಾಷ್ಟ್ರೀಯ ನ್ಯಾಯ ಮಂಡಲಿ ನೀಡಿರುವ ಆದೇಶವನ್ನೂ ಜಾರಿ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಉಪಸಿಬ್ಬಂದಿ ಹುದ್ದೆಗಳಿಗೆ ಈಗಿರುವ ಕೂಲಿಗಳನ್ನೇ ನೇಮಕ ಮಾಡಿಕೊಳ್ಳಬೇಕು. ಎಲ್ಲಾ ಗ್ರಾಮೀಣ ಬ್ಯಾಂಕುಗಳಲ್ಲಿ ಸಾಕಷ್ಟು ಸಂಖ್ಯೆಗಳಲ್ಲಿ ಖಾಲಿ ಇರುವ ಉಪ ಸಿಬ್ಬಂದಿ ಹುದ್ದೆಗಳನ್ನು ಹಾಲಿ ಅರ್ಹತೆಯುಳ್ಳ ಕೂಲಿಗಳನ್ನೇ ನೇಮಕಾತಿ ಮಾಡಿಕೊಳ್ಳಬೇಕು. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಬಟವಾಡೆಗಳನ್ನು ಗ್ರಾಮೀಣ ಬ್ಯಾಂಕ್ಗಳೇ ನಿರ್ವಹಿಸುತ್ತಿರುವ ಹಿನ್ನಲೆಯಲ್ಲಿ ಕೆಲಸದ ಒತ್ತಡ ಹೆಚ್ಚಾಗಿದ್ದು, ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕದ ಪ್ರಗತಿ ಗ್ರಾಮೀಣ ಬ್ಯಾಂಕ್, ಕೇರಳದ ಸೌತ ಮಲಬಾರ ಗ್ರಾಮೀಣ ಬ್ಯಾಂಕ್ ಮತ್ತು ಉತ್ತರ ಪ್ರದೇಶದ ಶ್ರೇಯಸ್ ಗ್ರಾಮೀಣ ಬ್ಯಾಂಕ್ಗಳ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಪಾಲ್ಗೊಳ್ಳಲಿದೆ. ಈ ಮೂರು ಬ್ಯಾಂಕ್ಗಳಿಂದ 300ಕ್ಕೂ ಹೆಚ್ಚಿನ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿವೆ ಎಂದು ಅವರು ತಿಳಿಸಿದ್ದಾರೆ.