ಮೊಸರು ಕುಡಿಕೆ ಉತ್ಸವಕ್ಕೆ ಶಿವಮಣಿ ಡ್ರಮ್ ಮೆರಗು
ಉಡುಪಿಯಲ್ಲಿ ಶಿವಮಣಿ : ಈ ಬಾರಿ ಸಾರ್ವಜನಿಕರಿಗೆ ಉಂಡೆ ಚಕ್ಕುಲಿಯ ಬದಲು ಬಾಳೆಹಣ್ಣುಗಳನ್ನು ವಿತರಿಸಲಾಯಿತು. ನಾಣ್ಯ, ನೋಟು ಹಾಗೂ ಟೋಪಿಗಳನ್ನು ನೆರೆದಿದ್ದ ಭಕ್ತರಿಗೆ ವಿತರಿಸಿದ್ದು ವಿಶೇಷ. ಖ್ಯಾತ ಡ್ರಮ್ ವಾದಕ ಶಿವಮಣಿ ಇದೇ ಮೊದಲ ಬಾರಿಗೆ ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ಡ್ರಮ್ ವಾದನ ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದರು. ಶಿವಮಣಿ ಅವರಿಗೆ ಲಕ್ಷ್ಮೀವರ ತೀರ್ಥರು 108 ಗ್ರಾಂ ತೂಕದ ಚಿನ್ನದ ಸರ ನೀಡಿ ಗೌರವಿಸಿದರು.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ಕರಾವಳಿಯಲ್ಲಿ ಅಟ್ಟೆ ಮಡಿಕೆ ಒಡೆಯುವುದು, ಉದ್ದಕಂಬ ಏರುವುದು, ವಿವಿಧ ಆಟೋಟ ಸ್ಪರ್ಧೆಗಳು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮಂಗಳೂರಿನ ಕದ್ರಿ, ಅತ್ತಾವರ, ತೊಕ್ಕೂಟ್ಟು, ಕಾವೂರು, ಉರ್ವಾದಲ್ಲಿ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ಜರಗಿತು. ಶ್ರೀಕೃಷ್ಣ ದೇವರ ಭಾವಚಿತ್ರ, ವಿಗ್ರಹದ ಭವ್ಯ ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿದರು. ವೈವಿಧ್ಯಮಯ, ಆಕರ್ಷಕ ಟ್ಯಾಬ್ಲೋಗಳು, ಹುಲಿ ವೇಷ ಸೇರಿದಂತೆ ವಿವಿಧ ವೇಷಗಳು ಶೋಭಾಯಾತ್ರೆಗೆ ಮೆರಗು ನೀಡಿದವು.
ಕುಳಾಯಿ, ಕಾವೂರು, ಕಾಟಿಪಳ್ಳ, ಚಿತ್ರಾಪುರ, ಪಾವಂಜೆ, ಕಿನ್ನಿಗೋಳಿ, ಅತ್ತೂರು- ಕಾಫಿಕಾಡ್, ಮಳಲಿ, ಮೂಲ್ಕಿ, ಗಂಜಿಮಠ, ಗುರುಪುರ, ಸುಂಕದಕಟ್ಟೆ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಮೊಸರುಕುಡಿಕೆ ಉತ್ಸವ ಅದ್ದೂರಿಯಿಂದ ಜರಗಿತು. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕಿನಲ್ಲೂ ಅಲ್ಲಲ್ಲಿ ಮೊಸರುಕುಡಿಕೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.