ಫ್ರೀಡಂ ಪಾರ್ಕಲ್ಲಿ ಭ್ರಷ್ಟ ವಿರೋಧಿ ಜನಸಾಗರ
ಸಾಫ್ಟ್ ವೇರ್ ಇಂಜಿನಿಯರುಗಳು, ಕಾಲೇಜು ವಿದ್ಯಾರ್ಥಿಗಳು, ವೈದ್ಯರು, ವಕೀಲರು, ಕಾರ್ಮಿಕರು, ನಾನಾ ವೇಷಧಾರಿಗಳು, ನಾನಾ ಸಂಘಟನೆಗಳ ಒಕ್ಕೂಟಗಳದೆಲ್ಲ ಒಂದೇ ಒಕ್ಕೊರಲ ದನಿ, ಅದು "ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು, ಅಣ್ಣಾ ಹಜಾರೆಗೆ ಜೈ". [ಚಿತ್ರಪಟ : ಫ್ರೀಡಂ ಪಾರ್ಕ್ ಬೆಂಗಳೂರು]
ಶನಿವಾರವಾದ್ದರಿಂದ ಕಚೇರಿ ಕೆಲಸವಿಲ್ಲದ ಸಾಫ್ಟ್ ವೇರ್ ಇಂಜಿನಿಯರುಗಳು ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ, ಕಾಲೇಜು ಹುಡುಗರು ಪ್ರಿನ್ಸಿಯಿಂದ ಪರ್ಮಿಷನ್ ತೆಗೆದುಕೊಂಡು ಗುಂಪುಗುಂಪಾಗಿ ಬಂದಿದ್ದಾರೆ, ಪರ್ಮಿಷನ್ ನೀಡದಿದ್ದರೂ ಕ್ಲಾಸಿಗೆ ಚಕ್ಕರ್ ಹಾಕಿದವರು ಅನೇಕರು.
ಪಾದರಕ್ಷೆಗಳನ್ನೆಲ್ಲ ಪೆಂಡಾಲಿನ ಹೊರಗಡೆ ಚೆಲ್ಲಾಪಿಲ್ಲಿಯಾಗಲು ಬಿಟ್ಟು ತದೇಕಚಿತ್ತದಿಂದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ವಿಚಾರಭರಿತ, ಸ್ಫೂರ್ತಿಯುತ ಮಾತುಗಳನ್ನು ತದೇಕಚಿತ್ತದಿಂದ ಕೇಳುತ್ತಿರುವ ಗುಂಪು ಒಂದಾದರೆ, ಗಲ್ಲಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣ ಬಳಿದುಕೊಂಡು ಜನ ಲೋಕಪಾಲ ಮಸೂದೆ ಮಂಡಿಸಲು ಮೀನಮೇಷ ಎಣಿಸುತ್ತಿರುವ ಕೇಂದ್ರದ ವಿರುದ್ಧ ಧಿಕ್ಕಾರ ಕೂಗುತ್ತಿರುವ ಗುಂಪುಗಳು ಮತ್ತೊಂದೆಡೆ.
ಸಂತೋಷ್ ಹೆಗ್ಡೆ ಭಾಷಣಕ್ಕೆ ನಿಲ್ಲುತ್ತಿದ್ದಂತೆ ನೆರೆದಿದ್ದ ಜನರ ಒಕ್ಕೊರಲ ಕೂಗು ಕಟ್ಟಿಕೊಂಡ ಮೋಡಗಳನ್ನು ಛಿದ್ರಛಿದ್ರ ಮಾಡಿ ಮುಗಿಲು ಮುಟ್ಟಿತ್ತು. ಕೈಯಲ್ಲಿ ಹಿಡಿದುಕೊಂಡ ಝೇಂಡಾಗಳು ಸ್ವಚ್ಛಂದವಾಗಿ ಹಾರಾಡಿದವು, ಕಿವಿಗಡಚಿಕ್ಕುವ ಚಪ್ಪಾಳೆಗಳ ಸದ್ದು ಪಕ್ಕದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಸದ್ದನ್ನು ಅಡಗಿಸಿತ್ತು.
ಈ ಹೋರಾಟದಲ್ಲಿ ಅಣ್ಣಾ ಹಜಾರೆ ಒಬ್ಬರೇ ಇಲ್ಲ. ಇಲ್ಲಿ ಹೋರಾಟಕ್ಕೆ ಇಳಿದಿರುವ ಪ್ರತಿಯೊಬ್ಬರೂ ಅಣ್ಣಾ ಹಜಾರೆನೆ ಎಂಬ ಭಾವ ತಾನೇ ತಾನಾಗಿದೆ. ಮಾಜಿ ಕೇಂದ್ರ ಕಾರಾಗೃಹವನ್ನು ಪ್ರತಿಭಟನೆಗಳಿಗಾಗಿಯೇ ಮೀಸಲಿಡಲಾಗಿರುವ ಫ್ರೀಡಂ ಪಾರ್ಕ್ ಈ ಸಾರ್ಥಕದ ಭಾವ ತುಂಬಿಕೊಂಡಿದೆ.