ಬಂಗಾರಪ್ಪನವರ ಆಪ್ತ ಮುಂಡ್ಲೂರು ರಾಮಪ್ಪ ನಿಧನ
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಮತ್ತು ಅಪಾರ ಬಂಧುವರ್ಗ, ಮಿತ್ರರು, ಆಪ್ತರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಎಂ. ರಾಮಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚೇತರಿಸಿಕೊಳ್ಳದೆ ಅಸುನೀಗಿದರು.
ಮೃತರು ಬಳ್ಳಾರಿ ನಗರಸಭೆ ಸದಸ್ಯರಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟು ಎಸ್. ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿದ್ದರು. 1978ರಲ್ಲಿ ಶಾಸಕರಾಗಿದ್ದರು. 2 ಅವಧಿಗೆ ಕುರುಗೋಡು ವಿಧಾನಸಭಾ ಕ್ಷೇತ್ರದಿಂದ, 2 ಅವಧಿಗೆ ಬಳ್ಳಾರಿ ವಿಧಾನಸಭಾ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆ ಆಗಿದ್ದರು.
ರಾಮಕೃಷ್ಣ ಹೆಗಡೆ ಅವರ ಜೊತೆ ಗುರುತಿಸಿಕೊಂಡು ಜನತಾದಳದ ಚಕ್ರದ ಚಿಹ್ನೆಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಸೇರಿ ಎಸ್. ಬಂಗಾರಪ್ಪ ಅವರ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದರು.
ಶೋಕ ಸಂತಾಪ : ಮೃತರ ಆತ್ಮಕ್ಕೆ ಶಾಂತಿ ಕೋರಿ ಮಾಜಿ ಸಂಸದರಾದ ಕೋಳೂರು ಬಸವನಗೌಡ, ಎನ್.ವೈ. ಹನುಮಂತಪ್ಪ, ಮಾಜಿ ಸಚಿವ ಎಂ. ದಿವಾಕರಬಾಬು, ಮಾಜಿ ಶಾಸಕರಾದ ಎಂ. ಶಂಕರರೆಡ್ಡಿ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ, ಹಿರಿಯ ಕಾಂಗ್ರೆಸ್ಸಿಗ ಎಚ್.ಎಂ. ಸುಧಾಕರ್, ವಿಧಾನಪರಿಷತ್ ಮಾಜಿ ಸದಸ್ಯ ಕೆ. ನಿರಂಜನನಾಯ್ಡು, ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ಎನ್. ಸೂರ್ಯನಾರಾಯಣರೆಡ್ಡಿ ಸೇರಿ ಅನೇಕರು ಮೃತರ ಅಂತಿಮದರ್ಶನ ಪಡೆದು, ಶೋಕ ವ್ಯಕ್ತಪಡಿಸಿದ್ದಾರೆ.