ಮೈಸೂರಿನಲ್ಲಿಯೂ ಜೋಗಯ್ಯ ಹಂಗಾಮಾ
ಗುರುವಾರ ಚಿತ್ರವನ್ನು ನಾಲ್ಕಕ್ಕಿಂತ ಹೆಚ್ಚಿನ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಾತುಗಳು ಕೇಳಿಬಂದಿತಲ್ಲದೆ, ಕೆಲವು ಚಿತ್ರಮಂದಿರಗಳು ಇದಕ್ಕೆ ಒಪ್ಪಿದ್ದವು. ಆದರೆ ಶಿವರಾಜ್ಕುಮಾರ್ ಅಭಿಮಾನಿಗಳು ನಾಲ್ಕಕ್ಕಿಂತ ಹೆಚ್ಚಿನ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.
ಒಂದಕ್ಕಿಂತ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವುದೇ ದೊಡ್ಡ ವಿಷಯವಾಗಿದೆ. ಒಂದು ವೇಳೆ ಹೆಚ್ಚಿನ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ಆದಾಯ ಬರಬಹುದು ಅಷ್ಟೆ. ಆದರೆ ನೂರು ದಿನಗಳ ಪ್ರದರ್ಶನ ಕಾಣುವ ಕನಸಿಗೆ ತೊಂದರೆಯಾಗಬಹುದು ಎಂಬುವುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು.
ಇದಕ್ಕೆ ಮಣಿದ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಾದ ಪ್ರೇಮ್ರವರು ಮೊದಲು ಒಪ್ಪಿಗೆ ನೀಡಿದಂತೆ ಕೇವಲ ನಾಲ್ಕು ಚಿತ್ರಮಂದಿರದಲ್ಲಿ ಮಾತ್ರ ಬಿಡುಗಡೆ ಮಾಡುವುದಾಗಿ ಸ್ಪಷ್ಟನೆ ನೀಡಿದ್ದರು. ಅದರಂತೆ ನಗರದ ಸಂಗಂ, ಗಾಯಿತ್ರಿ, ಗೋಕುಲ ಹಾಗೂ ಸರಸ್ವತಿ ಚಿತ್ರಮಂದಿರದಲ್ಲಿ ಶುಕ್ರವಾರ ಚಿತ್ರ ಬಿಡುಗಡೆಯಾಗಿದೆ.
ಸದ್ಯಕ್ಕೆ ಭಾನುವಾರದವರೆಗೆ ಈ ನಾಲ್ಕು ಚಿತ್ರಮಂದಿರದಲ್ಲಿ ಟಿಕೆಟ್ ಬುಕ್ ಆಗಿದ್ದು, ಇಂದು ಚಿತ್ರವನ್ನು ನೋಡಲು ಸುತ್ತಲಿನ ಹಳ್ಳಿಗಳಿಂದ ಬಂದ ಹಲವರು ಟಿಕೆಟ್ ಸಿಗದೆ ನಿರಾಶೆಯಿಂದ ಹಿಂತಿರುಗಿದ್ದಾರೆ.