ಆ. 15 ರಂದು ಶಾಲೆಗೆ ರಜ ಇರ್ಬೇಕಾ, ಇರ್ಬಾರ್ದಾ ?
ನಗರದೆಲ್ಲೆಡೆ 64ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಬಿಸುಪು ಕಾಣುತ್ತಿದೆ. ಆದರೆ, ಈ ಸಂಭ್ರಮ ಕಾಣದಿರುವುದು ಕೆಲ 'ಸೋ ಕಾಲ್ಡ್' ಹೈಕ್ಲಾಸ್ ಶಾಲೆಗಳಲ್ಲಿ. ಧ್ವಜದ ಹಾರಿಸುವ ಮಾತಿಲ್ಲ, ಮಕ್ಕಳಿಗೆ ಸಿಹಿ ತಿಂಡಿ ನೀಡುವ ಪ್ರಮೇಯವಿಲ್ಲ, ಗಾಂಧಿ, ನೆಹರೂ ಬಗ್ಗೆ ಭಾಷಣಗಳಿಲ್ಲ, ಪ್ರಭಾತ್ ಫೇರಿಯಂತೂ ಇಲ್ಲವೇ ಇಲ್ಲ.
ಬಿಷಪ್ ಕಾಟನ್, ಬಾಲ್ಡವಿನ್, ಸೋಫಿಯಾ ಮುಂತಾದ ಶಾಲೆಗಳು ಸೇರಿದಂತೆ ಅನೇಕ ಆಂಗ್ಲ ಮಾಧ್ಯಮದ ಶಾಲೆಗಳು ಆಂಗ್ಲರ ದಾಸ್ಯದಿಂದ ಹೊರಬಂದಂತೆ ಕಾಣುತ್ತಿಲ್ಲ. ಆಗಸ್ಟ್ 15ರಂದು ಶಾಲಾ ಮಕ್ಕಳಿಗೆಲ್ಲ ರಜಾ ನೀಡಿ ಸ್ವಾತಂತ್ಯ ಹಬ್ಬದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡಿವೆ.
ಪ್ರತಿ ಶಾಲೆಗಳಲ್ಲಿ ಸ್ವಾತಂತ್ರೋತ್ಸವ ಆಚರಿಸಬೇಕೆಂದು ಶಿಕ್ಷಣ ಇಲಾಖೆ ಸುತ್ತೋಲೆ ರವಾನಿಸಿದ್ದರೂ, ಅಂದು ರಜಾದ ಮಜಾ ಉಡಾಯಿಸುತ್ತಿರುವ ಶಾಲೆಗಳು, 'ನಮಗೆ ಸುತ್ತೋಲೆ ಬಂದೇ ಇಲ್ಲ' ಎಂದು ಜಾಣಮರೆವು ತೋರಿಸುತ್ತಿವೆ. ಮಕ್ಕಳಲ್ಲಿ ದೇಶಭಕ್ತಿಯ ಶಕ್ತಿ ತುಂಬಬೇಕಾದ ಶಾಲೆಗಳು ಕರ್ತವ್ಯಪ್ರಜ್ಞೆಯನ್ನು ಮರೆಯುತ್ತಿವೆ. ನೀವೇ ಹೇಳಿ, ಆ. 15 ರಂದು ಶಾಲೆಗೆ ರಜ ಇರ್ಬೇಕಾ, ಇರ್ಬಾರ್ದಾ ?
"ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಪ್ರತಿವರ್ಷ ಸಮವಸ್ತ್ರ ಧರಿಸಿ, ಧ್ವಜಾರೋಹಣ ಮಾಡಿ, ಭಾಷಣಗಳನ್ನು ಕೇಳಿ, ಜನಗಣಮನ ಹೇಳಿ, ಕಳ್ಳೆಪುರಿ ತಿಂದು ನಲಿದಾಡಿ ಬರುತ್ತಿದ್ದೆವು. ಆದರೆ, ಇಂದಿನ ಶಿಕ್ಷಕರಿಗೆ ಏನಾಗಿದೆ ಎಂಬುದೇ ತಿಳಿಯುತ್ತಿಲ್ಲ" ಎಂದು ವ್ಯಥೆ ವ್ಯಕ್ತಪಡಿಸಿದ್ದಾರೆ ಕೆಂಗೇರಿಯ ಶಾಮಣ್ಣ ಅವರು. ವಿಶ್ವೇಶ್ವರ ಹೆಗಡೆ ಕಾಗೇರಿಯವರು ಏನು ಹೇಳುತ್ತಾರೆ?