ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಧಾವಿಸಿದ ಗಡ್ಕರಿ
ದೆಹಲಿಯಿಂದ ಶುಕ್ರವಾರ ಬೆಳಗ್ಗೆ 8.30 ಗಂಟೆ ಸುಮಾರಿಗೆ ವಿಶೇಷ ವಿಮಾನದಿಂದ ಹೊರಟ ನಿತಿನ್ ಗಡ್ಕರಿ ಅವರು 11 ಗಂಟೆ ಸುಮಾರಿಗೆ ಜಿಂದಾಲ್ ಏರ್ಸ್ಟ್ರಿಪ್ ಗೆ ಆಗಮಿಸಿದ್ದಾರೆ. ಜಿಂದಾಲ್ ಏರ್ಸ್ಟ್ರಿಪ್ನಿಂದ ಬಳ್ಳಾರಿಗೆ ರೆಡ್ಡಿಗಳ ರುಕ್ಮಿಣಿ' ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿದರು.
ಮೊದಲಿಗೆ ಕುಟುಂಬ ಸಮೇತ ಹೃದ್ರೋಗ ತಜ್ಞ ಡಾ. ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿ ನಡೆಯುವ ವರಮಹಾಲಕ್ಷ್ಮಿ ವ್ರತದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಶ್ರೀರಾಮುಲು ನೇತೃತ್ವದಲ್ಲಿ ಆಯೋಜನೆಗೊಂಡಿರುವ 12ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನೂತನ ವಧು ವರರನ್ನು ಆಶೀರ್ವದಿಸಲಿದ್ದಾರೆ.
ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಸೋಮಣ್ಣ, ಅನಂತಕುಮಾರ್, ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ, ಅನಂದ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 12 ವರ್ಷದ ನಂತರ ಮೊದಲ ಬಾರಿಗೆ ಬಳ್ಳಾರಿ ಬಸ್ ಮಿಸ್ ಮಾಡಿಕೊಂಡಿರುವ ಸುಷ್ಮ ಸ್ವರಾಜ್ ವ್ರತಭಂಗ ಮಾಡಿದ್ದಾರೆ.