ದಯವಿಟ್ಟು ಹೆಂಡತಿಯ ದಬ್ಬಾಳಿಕೆಯಿಂದ ಮುಕ್ತಿ ನೀಡಿ
ಹೆಂಡತಿಯೇ ಗಂಡಂದಿರಿಂದ ಹೆಚ್ಚಿನ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಒಪ್ಪದ, ಭಯೋತ್ಪಾದನೆ ಬೇರೆಲ್ಲೂ ಇಲ್ಲ ಮನೆಯಲ್ಲೇ ಇದೆ ಎಂದು ಆಣೆ ಪ್ರಮಾಣ ಮಾಡಿ ಹೇಳುವ ದೌರ್ಜನ್ಯಕ್ಕೊಳಗಾಗಿರುವ 100 ಗಂಡಂದಿರ ಹಿಂಡು ಕೊಲ್ಕತಾದಲ್ಲಿ ಆ.14ರಂದು ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಪ್ರಯಾಣ ಬೆಳೆಸುತ್ತಿದೆ.
"ಪತ್ನಿಯ ರೌದ್ರಾವತಾರದಿಂದಾಗಿ ಅನೇಕ ಪುರುಷರು ಸಾಯುತ್ತಿದ್ದಾರೆ. ಮಹಿಳೆಯರ ರಕ್ಷಣೆಗೆ ಅನೇಕ ಕಾನೂನುಗಳಿಗೆ. ಆದರೆ, ಮಹಿಳೆಯರಿಂದಲೇ ಭೀತಿಗೊಳಗಾಗಿರುವ ಪುರುಷರಿಗೆ ಯಾವ ಕಾನೂನಿದೆ?" ಎಂದು ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಷನ್ (SIFF) ನ ಸಹಸಂಸ್ಥಾಪಕ ಸಂತೋಷ್ ಪಾಟೀಲ್ ಪ್ರಶ್ನಿಸುತ್ತಾರೆ.
"ಮದುವೆ ಮಾಡಿಕೊಂಡರೂ ಒಂದು ದಿನವೂ ಸುಖ ಕಾಣಲಿಲ್ಲ. ಮನೆಯಲ್ಲಿಯೇ ಸ್ವಾತಂತ್ರ್ಯವನ್ನು ಕಳೆದುಕೊಂಡಾಗಿರುವುದರಿಂದ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಎಳ್ಳಷ್ಟು ಉತ್ಸಾಹವೂ ನಮ್ಮಲ್ಲಿಲ್ಲ. ಪಕ್ಷಪಾತಿ ಸಮಾಜ ದಬ್ಬಾಳಿಕೆಗೊಳಗಾದ ಗಂಡಸರನ್ನೇ ಕಡೆಗಣಿಸಿದೆ" ಎಂಬುದು ಸಿಫ್ ನ ಸಹಸಂಸ್ಥಾಪಕರಲ್ಲೊಬ್ಬರಾದ ವಿವೇಕ್ ನುಡಿಗಳು.