ದೇವ ಪ್ರಶ್ನೆ ಇಂದು ಮುಕ್ತಾಯ: ಕಾದಿದೆ ರಾಷ್ಟ್ರಕ್ಕೆ ಆಪತ್ತು
ಈ ಮಧ್ಯೆ, ಕಳೆದ ಎರಡು ದಿನಗಳಲ್ಲಿ ಅಷ್ಟಮಂಗಲ ಪ್ರಶ್ನೆ ಧಾರ್ಮಿಕ ವಿಧಿಯಿಂದ ಸ್ಪಷ್ಟಗೊಡಿರುವ ಅಂಶವೆಂದರೆ ಅನಂತ ಪದ್ಮನಾಭ ಸ್ವಾಮಿ ಸಂಪತ್ತನ್ನು ದೇವಸ್ಥಾನದ ಜಾಗದಿಂದ ಯಾವುದೇ ಕಾರಣಕ್ಕೂ ಹೊರ ಸಾಗಿಸಬಾರದು ಎಂಬುದು.
'ಅನಂತ ಸಂಪತ್ತನ್ನು ಇಲ್ಲಿಂದ ಹೊರತೆಗೆದರೆ ಭಾರಿ ವಿನಾಶ ಕಾದಿದೆ. ದೇವಸ್ಥಾನದ ಪಾವಿತ್ರ್ಯತೆಗೂ ಧಕ್ಕೆಯೊದಗಲಿದೆ' ಎಂದು ಪ್ರಧಾನ ದೈವಜ್ಞ ಮಧುರ ನಾರಾಯಣ ರಂಗಾಭಟ್ ಸುದ್ದಿಗಾರರಿಗೆ ಮಂಗಳವಾರ ರಾತ್ರಿ ತಿಳಿಸಿದ್ದಾರೆ. ಇನ್ನು, ಬಿ ಉಗ್ರಾಣ ಸರಿಯಾಗಿ ಗರ್ಭಗುಡಿಯ ಕೆಳಗೇ ಇರುವುದರಿಂದ ಆ ಉಗ್ರಾಣದ ಬಾಗಿಲು ತೆಗೆದರೆ ಅಪಾಯ ಕಟ್ಟಿಟ್ಟಬುತ್ತಿ. ಈ ಬಗ್ಗೆ ಜಾಗ್ರತೆ ವಹಿಸುವುದು ಒಳಿತು ಎಂದೂ ಅವರು ಎಚ್ಚರಿಸಿದ್ದಾರೆ. ಗರ್ಭಗುಡಿಯಲ್ಲಿ ಶಯನ ಭಂಗಿಯಲ್ಲಿರುವ ವಿಷ್ಣು ಮೂರ್ತಿಯ ವಿಗ್ರಹ ಇಲ್ಲಿದೆ.
ಇದುವರೆಗಿನ ಅಷ್ಟಮಂಗಲ (ದೇವ ಪ್ರಶ್ನೆ) ಪ್ರಶ್ನೆ ವಿಧಿಯಿಂದ ಮತ್ತೊಂದು ಆತಂಕಕಾರಿ ವಿಷಯಯೂ ಹೊರಬಿದ್ದಿದೆ. ಏನೆಂದರೆ, ಅನಂತ ಸಂಪತ್ತು ಹೊರತೆಗೆದ ಕಾಲದಲ್ಲಿ ದೇವಸ್ಥಾನದ ಧಾರ್ಮಿಕ ಆಚರಣೆಗಳಲ್ಲಿ ಭಾರಿ ನ್ಯೂನತೆಗಳು ಕಂಡುಬಂದಿವೆ. ಇದು ರಾಷ್ಟ್ರವನ್ನೂ ಕಾಡಲಿದೆ ಎಂದು ಜ್ಯೋತಿಷಿಯೂ ಆದ ದೈವಜ್ಞ ರಂಗಾಭಟ್ ಹೇಳಿದ್ದಾರೆ.
ಬುಧವಾರ ನಿರ್ಣಾಯಕ: ಮೂರನೆಯ ದಿನವಾದ ಇಂದು (ಬುಧವಾರ) ಈ ಎರಡು ದಿನಗಳಲ್ಲಿ ದೇವ ಪ್ರಶ್ನೆ ವಿಧಿಯಿಂದ ತಿಳಿದುಬಂದಿರುವ ಅಂಶಗಳನ್ನೆಲ್ಲ ಒಟ್ಟುಗೂಡಿಸಿ 'ಪರಿಹಾರ ಕ್ರಿಯೆ' ಗಳನ್ನು ಸೂಚಿಸುವುದಾಗಿ ಅವರು ತಿಳಿಸಿದ್ದಾರೆ. ದೇವಸ್ಥಾನದ ಪೂರ್ವ ಭಾಗದಲ್ಲಿರುವ 'ನಾಟಕಶಾಲೆ'ಯಲ್ಲಿ ದೇವ ಪ್ರಶ್ನೆ ವಿಧಿ ವೀಧಾನಗಳು ನಡೆದಿವೆ.
ಗಮನಾರ್ಹವೆಂದರೆ, ಅನಂತ ಸಂಪತ್ತು ಮರು ಲೆಕ್ಕಾಚಾರಕ್ಕಾಗಿ ಸುಪ್ರೀಂಕೋರ್ಟ್ ನಿಯೋಜಿಸಿರುವ ಐದು ಸದಸ್ಯರ ಉನ್ನತ ಸಮಿತಿ ಮುಂದಿನ ಹೆಜ್ಜೆ ಏನು ಎಂಬುದನ್ನು ನಿರ್ಧರಿಸಲು ಇಂದು ಸಭೆ ಸೇರಲಿದೆ. ದೆಹಲಿಯ ನ್ಯಾಷನಲ್ ಮ್ಯೂಸಿಯಂನ ನಿರ್ದೇಶಕ ಸಿವಿ ಆನಂದ ಬೋಸ್ ನೇತೃತ್ವದ ಸಮಿತಿ ಕಳೆದ ವಾರವೂ ಸಭೆ ಸೇರಿತ್ತು.