ಕಟ್ಟಾ & ಸನ್ ಪರಪ್ಪನ ಅಗ್ರಹಾರ ಜೈಲಿಗೆ ರವಾನೆ
ಲೋಕಾಯುಕ್ತ ವಿಶೇಷ ನ್ಯಾಯಾಧೀಶ ಸುಧೀಂದ್ರ ರಾವ್ ಅವರ ಆದೇಶದ ಮೇರೆಗೆ ಲೋಕಾಯುಕ್ತ ಡಿವೈಎಸ್ ಪಿ ಗಿರೀಶ್ ನೇತೃತ್ವದ ಪೊಲೀಸ್ ತಂಡ ಎರಡು ವಾಹನಗಳಲ್ಲಿ ಆರೋಪಿಗಳನ್ನು ಹೊತ್ತು ಪರಪ್ಪನ ಅಗ್ರಹಾರ ಜೈಲಿಗೆ ಪ್ರಯಾಣ ಬೆಳೆಸಿದ್ದಾರೆ.
ಬಿಗಿ ಭದ್ರತೆ : ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ಕಟ್ಟಾ ಅವರ ವಿರುದ್ಧ ನ್ಯಾಯಾಂಗ ಬಂಧನದ ಆದೇಶ ಹೊರ ಬಿದ್ದ ಸುದ್ದಿ ಹಭ್ಬಿದ ತಕ್ಷಣ ಅವರ ಅಭಿಮಾನಿಗಳು, ಸಾರ್ವಜನಿಕರು ಸಿವಿಲ್ ಕೋರ್ಟ್ ಆವರಣದತ್ತ ನುಗ್ಗಿ ಬಂದರು. ಸುರಿವ ಮಳೆಯನ್ನು ಲೆಕ್ಕಿಸದೆ ಕಟ್ಟಾ ಅಂಡ್ ಸನ್ ನೋಡಲು ಜನ ಕಾತುರರಾಗಿ ಕಾಯುತ್ತಿದ್ದರು.
ನ್ಯಾಯಾಂಗ ಬಂಧನಕ್ಕೊಳಪಟ್ಟವರಲ್ಲಿ ಮಾಜಿ ಐಟಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್, ಇಟಾಸ್ಕಾ ಕಂಪನಿ ಎಂಡಿ ಇಟಾಸ್ಕಾ ಎಸ್ ವಿ ಶ್ರೀನಿವಾಸ್ ಪ್ರಮುಖರು. ಬಿ.ಎಲ್ ವೆಂಕಯ್ಯ, ಎಸ್ ಜಗಯ್ಯ ತಲೆ ಮರೆಸಿಕೊಂಡಿದ್ದಾರೆ. ಉಳಿದಂತೆ ಗ್ರಾಮ ಪಂಚಾಯ್ತಿ ಸದಸ್ಯ ಮಂಜು, ಟಿಪಿ ಮುನಿನಾರಾಯಣಪ್ಪ, ಗೋಪಿ, ಬಸವಪೂರ್ಣಯ್ಯ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.
ಸದಾಶಿವ ನಗರದ ಐಷಾರಾಮಿ ಬಂಗಲೆಯಲ್ಲಿ ಸುಖವಾಗಿದ್ದ ಮಾಜಿ ಸಚಿವ ಕಟ್ಟಾ ಅವರು ಸಹ ಆರೋಪಿಗಳ ಜೊತೆ ಪರಪ್ಪನ ಅಗ್ರಹಾರದ ಬಯಲು ಬಂದೀಖಾನೆಯಲ್ಲಿ ರಾತ್ರಿ ಕಳೆಯಬೇಕಾಗಿದೆ. ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ, ವಿಚಾರಣೆ ನಡೆದು ಜಾಮೀನು ಮಂಜೂರಾಗುವವರೆಗೂ ಅಪ್ಪ ಮಗ ಜೈಲಿನಲ್ಲೇ ಇರಬೇಕಾಗುತ್ತದೆ.
ಫ್ಯಾಶ್ ಬ್ಲಾಕ್ : 2006-07ರಲ್ಲಿ ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಕಾಲದಲ್ಲಿ ಇಟಾಸ್ಕಾ ಸಾಫ್ಟ್ ವೇರ್ ಕಂಪನಿಯಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು 87 ಕೋಟಿ ರು ಗೂ ಅಧಿಕ ಲಂಚ ಪಡೆದಿದ್ದರು. ಬಂಡೆ ಕೊಡಿಗೆಹಳ್ಳಿಯಲ್ಲಿ ಕೆಐಎಡಿಬಿಗೆ ಸೇರಿದ್ದ 325 ಎಕರೆ ಭೂಮಿಯನ್ನು ಅಕ್ರಮವಾಗಿ ಕಂಪನಿಗೆ ನೀಡಿದ್ದರು ಎಂಬ ಆರೋಪ ಕಟ್ಟಾ ಅವರ ಮೇಲಿದೆ.
ಈ ಸಂಬಂಧ ಕ್ರಿಮಿನಲ್ ಕೇಸ್ ದಾಖಲಾದ ನಂತರ ಕಳೆದ ವರ್ಷ ಡಿ.3ರಂದು ಐಟಿ ಸಚಿವ ಹುದ್ದೆಗೆ ಕಟ್ಟಾ ಸುಬ್ರಮಣ್ಯ ರಾಜೀನಾಮೆ ನೀಡಿದ್ದರು. ಬಿಬಿಎಂಪಿ ಸದಸ್ಯರಾಗಿದ್ದ ಕಟ್ಟಾ ಜಗದೀಶ್ ಸಾಕ್ಷಿದಾರನಿಗೆ ಲಂಚದ ಆಮಿಷ ಒಡ್ಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಜಾಮೀನು ಪಡೆದಿದ್ದರು. ಒಟ್ಟು 41 ಅಧ್ಯಾಯದ 18,000 ಪುಟಗಳ ಚಾರ್ಚ್ ಶೀಟ್ ಅನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.