ಕಟ್ಟಾ ಸುಬ್ರಮಣ್ಯ ನಾಯ್ಡು, ಜಗದೀಶ್ ಜೈಲಿಗೆ
ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆ ನಂತರ ಈ ಆದೇಶ ಹೊರ ಬಿದ್ದಿದ್ದು, ಉಳಿದ 7 ಜನ ಆರೋಪಿಗಳ ಜಾಮೀನು ಅರ್ಜಿ ಕೂಡಾ ವಜಾಗೊಂಡಿದೆ. ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕಟ್ಟಾ ಜಗದೀಶ್ ಜೊತೆಗೆ ಇಟಾಸ್ಕಾ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಅವರು ಕೂಡಾ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಉಳಿದಂತೆ ಗ್ರಾಮ ಪಂಚಾಯ್ತಿ ಸದಸ್ಯ ಮಂಜು, ಟಿಪಿ ಮುನಿನಾರಾಯಣಪ್ಪ, ಗೋಪಿ, ಬಸವಪೂರ್ಣಯ್ಯ ಆರೋಪಿಗಳಾಗಿದ್ದಾರೆ.
ಕಟ್ಟಾ ಕಣ್ಣೀರು:ನ್ಯಾಯಾಂಗ ಬಂಧನ ದ ಆದೇಶ ಹೊರ ಬೀಳುತ್ತಿದ್ದಂತೆ ಕೋರ್ಟ್ ಆವರಣದಲ್ಲೇ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕಟ್ಟಾ ಜಗದೀಶ್ ಅವರು ಗಳಗಳನೇ ಅತ್ತು, ಗೋಳಾಟ ಮಾಡಿದ ಘಟನೆ ನಡೆದಿದೆ. ಈ ವಿಷಯ ತಿಳಿದ ಬಿಜೆಪಿ ನಾಯಕ ಸಿ.ಟಿ ರವಿ ಕೋರ್ಟ್ ಗೆ ಆಗಮಿಸಿ ಮಾಜಿ ಸಚಿವ ಕಟ್ಟಾ ಅವರಿಗೆ ಸಾಂತ್ವಾನ ಹೇಳಿದ್ದಾರೆ.
ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ನಾಲ್ಕು ಬಾರಿ ಸಮನ್ಸ್ ಜಾರಿಗೊಳಿಸಲಾಗಿತ್ತು, ಜು.23ರಂದು ನಡೆದ ವಿಚಾರಣೆಯಲ್ಲಿ ಖುದ್ದು ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಮಾಜಿ ಸಚಿವ ಕಟ್ಟಾ ಅವರು ಕೋರ್ಟ್ ಗೆ ಹಾಜಾರಾಗಿರಲಿಲ್ಲ.
ಏನಿದು ಹಗರಣ?: ಕಟ್ಟಾ ಸುಬ್ರಮಣ್ಯ ನಾಯ್ಡು ಒಡೆತನದ ಇಟಾಸ್ಕ ಕಂಪನಿಗೆ 87 ಕೋಟಿ ರು ಮೌಲ್ಯದ 325 ಎಕರೆ ಮಂಜೂರು ಮಾಡಿಸಿಕೊಳ್ಳಲಾಗಿದೆ. ಕೆಐಎಡಿಬಿ ನೀಡಿದ ಪರಿಹಾರ ಧನವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಹೊರೆಸಲಾಗಿದೆ. 9 ಜನರ ವಿರುದ್ಧ 18 ಸಾವಿರ ಪುಟಗಳ ಆರೋಪ ಪಟ್ಟಿ ತಯಾರಾಗಿದೆ.