ಪತ್ರಕರ್ತರೇ ಹುಷಾರು, 'ಮರೆಗುಳಿ' ಕೃಷ್ಣ ಸಾಹೇಬರು ಗರಂ ಆಗಿದ್ದಾರೆ!
1956ರಲ್ಲಿ ಜಾರಿಗೊಳಿಸಲಾದ ಸಂಸದೀಯ ಕಲಾಪ (ವರದಿ ಪ್ರಕಟಣೆಗೆ ರಕ್ಷಣೆ) ಕಾಯ್ದೆಯ ಪ್ರಕಾರ ಸಂಸದೀಯ ಕಲಾಪಗಳ ಬಗ್ಗೆ ಪ್ರಕಟಗೊಂಡ ಗಣನೀಯ ಪ್ರಮಾಣದ ನೈಜತೆಯಿರುವ ವರದಿಯ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ನಡೆಯುವ ವಿಚಾರಣಾ ಪ್ರಕ್ರಿಯೆಗೆ ಯಾರೂ ಬಾಧ್ಯಸ್ಥರಾಗುವುದಿಲ್ಲವೆಂದು ತಿಳಿಸಿದೆ.
ಆದಾಗ್ಯೂ... ಕಳೆದ ವಾರ ಲೋಕಸಭೆಯಲ್ಲಿ ಎಂದಿನಂತೆ ಕಲಾಪ ನಡೆದಿತ್ತು. ಆ ವೇಳೆ ಸದನದಲ್ಲಿ ಹೇಳಿಕೆ ನೀಡುವಂತೆ ಸ್ಪೀಕರ್ ಮೀರಾ ಕುಮಾರ್ ತನಗೆ ಸೂಚಿಸಿದಾಗ ತಾನು ಅನ್ಯಮನಸ್ಕನಂತೆ ವರ್ತಿಸಿದ್ದಾಗಿ ವರದಿ ಮಾಡಿದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಸುದ್ದಿಸಂಸ್ಥೆಯ ವಿರುದ್ಧ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.
ಲೋಕಸಭಾ ಸ್ಪೀಕರ್ ಮೀರಾಕುಮಾರ್ ಶ್ರೀಲಂಕಾ ಪರಿಸ್ಥಿತಿಯ ಬಗ್ಗೆ ಹೇಳಿಕೆಯೊಂದನ್ನು ನೀಡುವಂತೆ ಕೃಷ್ಣಗೆ ಸೂಚಿಸಿದಾಗ ಅವರು ತಮ್ಮ ಆಸನದಲ್ಲಿರಲಿಲ್ಲ. ಬದಲಿಗೆ ಇನ್ನೊಂದೆಡೆ ಸಂಸತ್ನ ಇತರ ಸದಸ್ಯರ ಜೊತೆ ಹರಟೆಯಲ್ಲಿ ತೊಡಗಿದ್ದರೆಂದು ಪಿಟಿಐ ವರದಿ ಮಾಡಿತ್ತು.
ಸ್ಪೀಕರ್ ನಿರ್ದೇಶನದ ಬಗ್ಗೆ ಕೃಷಿ ಸಚಿವ ಶರದ್ ಪವಾರ್ ಅವರು ಕೃಷ್ಣ ಗಮನಕ್ಕೆ ತಂದಾಗ, ದಡಬಡಾಯಿಸಿ ಬಂದ ಕೃಷ್ಣ ಅವರು ತನ್ನ ಹೇಳಿಕೆಯ ಪ್ರತಿಗಾಗಿ ಫೈಲ್ನಲ್ಲಿ ಹುಡುಕಾಡ ತೊಡಗಿದರೂ ತಕ್ಷಣವೇ ಅವರಿಗೆ ಅದು ದೊರೆಯಲಿಲ್ಲ. ಬಳಿಕ ಲೋಕಸಭಾ ಕಾರ್ಯಾಲಯದ ಸಿಬ್ಬಂದಿಯು ಅವರಿಗೆ ಹೇಳಿಕೆಯ ಪ್ರತಿಯನ್ನು ಒದಗಿಸಿಕೊಟ್ಟರು ಎಂದು ಪಿಟಿಐ ವರದಿ ಮಾಡಿತ್ತು.
ತಡರಾತ್ರಿಯ ವೇಳೆಗೆ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಕರೆ ಮಾಡಿ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡುತ್ತಾ, ವಿದೇಶಾಂಗ ಇಲಾಖೆಯ ಸಹಾಯಕ ಸಚಿವೆ ಪ್ರಣೀತ್ ಕೌರ್ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವರಿಗೆ ಸಚಿವ ಕೃಷ್ಣ ತನ್ನ ಹೇಳಿಕೆಯ ಪ್ರತಿಗಳನ್ನು ನೀಡಿದ್ದರು.
ಲೋಕಸಭೆಯಲ್ಲಿ ಹೇಳಿಕೆ ನೀಡುವಂತೆ ಕೃಷ್ಣಗೆ ಸ್ಪೀಕರ್ ಸೂಚಿಸಿದಾಗ, ಅವರು ಕೌರ್ ಅವರಿಂದ ಪತ್ರಗಳನ್ನು ಪಡೆದುಕೊಳ್ಳಲು ಕಾಯಬೇಕಾಯಿತು ಎಂದು ತಿಳಿಸಿದರು. ಇದೊಂದು ಸಚಿವ ಅನ್ಯಮನಸ್ಕತೆಯ ಪ್ರಕರಣವಲ್ಲವೆಂದು ತಿಳಿಸಿದರು ಆ ಬಳಿಕ ಪಿಟಿಐ ತನ್ನ ಮೂಲ ವರದಿಗೆ ವಿದೇಶಾಂಗ ಅಧಿಕಾರಿಯವರ ಈ ಸ್ಪಷ್ಟೀಕರಣವನ್ನು ಸೇರ್ಪಡೆಗೊಳಿಸಿ ಪ್ರಕಟಿಸಿತು.
ಆದಾಗ್ಯೂ ಸುದ್ದಿಸಂಸ್ಥೆಗೆ ಕಾನೂನು ನೋಟಿಸ್ ಜಾರಿಗೊಳಿಸಲಾಗಿದೆ. ಸಚಿವ ಕೃಷ್ಣ ಪರ ನ್ಯಾಯವಾದಿಯೊಬ್ಬರು ಈ ಬಗ್ಗೆ ಹೇಳಿಕೆ ನೀಡಿ, ಪಿಟಿಐ ಪ್ರಕಟಿಸಿದ ವರದಿ ಸಂಪೂರ್ಣ ಸುಳ್ಳು ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆಯು ಜಾಹೀರಾತು ಪ್ರಕಟಿಸಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ತಿಳಿಸಿದ್ದಾರೆ.