ಹೊಸಕೆರೆಹಳ್ಳಿಯಲ್ಲಿ ಬಿಡಿಎಯಿಂದ ಭರ್ಜರಿ ಬೇಟೆ
ಸೋಮವಾರ ಆರಂಭವಾದ ಈ ಅಕ್ರಮ ಕಟ್ಟಡ ನೆಲಸಮ ಕಾರ್ಯಾಚರಣೆ ಮಂಗಳವಾರ ಕೂಡಾ ಮುಂದುವರೆದಿದೆ. ಸೋಮವಾರ ಅಂಗಡಿ ಮಾಲೀಕರು ಪ್ರತಿಭಟನೆ ನಡೆಸಿ ಆತಂಕದ ವಾತಾವರಣ ಸೃಷ್ಟಿಸಿದ್ದರು. ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರು. ಇಂದು ಎರಡು ತುಕಡಿಯಲ್ಲಿ ಬಂದ ಪೊಲೀಸರ ಸರ್ಪಗಾವಲಿನಲ್ಲಿ ಕಟ್ಟಡ ನೆಲಸಮ ಕಾರ್ಯಾಚರಣೆ ಮುಂದುವರೆದಿದೆ.
ವಿಶ್ವ ಭಾರತಿ ಹೌಸಿಂಗ್ ಸೊಸೈಟಿಗೆ ಸೇರಿದ ಜಾಗದಲ್ಲಿ ಕೆಲವರು ಅಕ್ರಮವಾಗಿ ಮನೆ, ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಕಟ್ಟಡಗಳನ್ನು ನೆಲಸಮಗೊಳಿಸಲು ಬಿಡಿಎ ಸೋಮವಾರ ಬೆಳಿಗ್ಗೆ 9 ಗಂಟೆಗೆ ಕಾರ್ಯಾಚರಣೆ ಆರಂಭಿಸಿತ್ತು.
ಬಸ್ ಬದಲಿ ಮಾರ್ಗ: ಶ್ರೀವಿದ್ಯಾನಗರಕ್ಕೆ ಹೊಂದಿಕೊಂಡತೆ ಇರುವ ರಸ್ತೆಯಲ್ಲಿ ಉಂಟಾಗಿರುವ ಆತಂಕದ ಪರಿಸ್ಥಿತಿ ಅರಿತ ಬಿಎಂಟಿಸಿ ಬಸ್ ಡ್ರೈವರ್ ಗಳು ಕತ್ರಿಗುಪ್ಪೆ ಮಾರ್ಗ ಹಿಡಿದಿದ್ದು ಸಾರ್ವಜನಿಕರಿಗೆ ತಿಳಿಯದೆ ಪರದಾಡಬೇಕಾಯಿತು. ಮೆಜೆಸ್ಟಿಕ್, ಮಾರ್ಕೆಟ್, ವಿಧಾನಸೌಧ ಜಯನಗರ ಕಡೆಗೆ ತೆರಳಬೇಕಾಗಿದ್ದ ಜನರು ಬಸ್ ಬದಲಿ ಮಾರ್ಗ ಬಗ್ಗೆ ತಿಳಿಯದೆ ಸುತ್ತಿ ಬಳಸಿ ಬಸ್ ನಿಲ್ದಾಣ ಹುಡುಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಟ್ಟಡ ನೆಲಸಮ ಮಾಡುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಟ್ಟಡಗಳನ್ನು ತೆರವುಗೊಳಿಸದಂತೆ ಹೈಕೋರ್ಟ್ ಆದೇಶ ನೀಡಿದೆ ಆದರೆ ಬಿಡಿಎ ಅಧಿಕಾರಿಗಳು ಯಾವುದನ್ನೂ ಲೆಕ್ಕಿಸದೆ ಮನೆ- ಅಂಗಡಿಗಳನ್ನು ನೆಲಸಮಗೊಳಿಸಿದ್ದಾರೆ ಎಂದು ಅಂಗಡಿ ಮಾಲೀಕರು ಪ್ರತಿಭಟನೆ ನಡೆಸಿದ್ದರು.