ಲೋಕಾಯುಕ್ತರ ದಾಳಿಗೆ ರೆಡ್ಡಿ ಸೋದರರ ಪ್ರತಿದಾಳಿ
ನನ್ನ ಹೆಸರು ಗಣಿ ವರದಿಯಲ್ಲಿ ಸೇರಿಸಿರುವ ಲೋಕಾಯುಕ್ತರು ಸುಳ್ಳು ಮಾಹಿತಿಯನ್ನು ನೀಡುವ ಮೂಲಕ ಅಪಮಾನ ಮಾಡಿದ್ದಾರೆ. ಸಂತೋಷ್ ಹೆಗ್ಡೆ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಕರುಣಾಕರ ರೆಡ್ಡಿ ಗುಡುಗಿದ್ದಾರೆ.
ಓಬಳಾಪುರಂ ಮೈನಿಂಗ್ ಕಾರ್ಪೋರೇಷನ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಾನು 2004ರಲ್ಲೇ ರಾಜೀನಾಮೆ ನೀಡಿದ್ದೇನೆ. ನಾನು ಯಾವುದೇ ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ದಾಖಲೆಗಳಿಲ್ಲ.
ಆದರೂ ಸುಳ್ಳು ಮಾಹಿತಿ ಸೇರಿಸಿರುವ ಲೋಕಾಯುಕ್ತರು 2006 ರಿಂದ 2011 ರ ನಡುವೆ ನಡೆದಿರುವ ಅಕ್ರಮ ಗಣಿಗಾರಿಕೆಯಲ್ಲಿ ನನ್ನ ಪಾತ್ರವಿದೆ ಎಂದು ಬಿಂಬಿಸಿದ್ದಾರೆ. ಇದು ಅಕ್ಷಮ್ಯ.
ಗಣಿವರದಿ ಬಗ್ಗೆ ಕಾನೂನು ತಜ್ಞರೊಡನೆ ಚರ್ಚೆ ನಡೆಸುತ್ತಿದ್ದೇವೆ. ಸಂತೋಷ್ ಹೆಗ್ಡೆ ಆರೋಪ ಮಾಡಿರುವಂತೆ ತನಿಖೆ ನಡೆಸಲು ಬಂದಿದ್ದ ಅರಣ್ಯಾಧಿಕಾರಿ ಯು.ವಿ. ಸಿಂಗ್ ಗೆ ಸೋಮಶೇಖರ ರೆಡ್ಡಿಯಾಗಲಿ ನಮ್ಮ ಕುಟುಂಬದ ಯಾವ ಸದಸ್ಯರೇ ಆಗಲಿ ಬೆದರಿಕೆ ಒಡ್ಡಿಲ್ಲ.
ಗಣಿ ಸಮೀಕ್ಷೆ, ಗಡಿ ಭಾಗದ ಬಗ್ಗೆ ಸಿಇಸಿ ವರದಿ ಸುಪ್ರೀಂಕೋರ್ಟ್ ಮುಂದಿದೆ. ಸಿಬಿಐ ತನಿಖೆ ನಡೆಸಿದೆ. ಎಲ್ಲೂ ಇಲ್ಲದ ಆರೋಪ ಲೋಕಾಯುಕ್ತರ ವರದಿಯಲ್ಲಿ ಮಾತ್ರ ಹೇಗೆ ಬಂದಿದೆ ತಿಳಿಯುತ್ತಿಲ್ಲ ಎಂದು ಕರುಣಾಕರ ರೆಡ್ಡಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಲೋಕಾಯುಕ್ತ ಸಂತೋಷ್ ಹೆಗ್ಡೆ, ರೆಡ್ಡಿ ಅವರು ಬೇಕಾದರೆ ನಮ್ಮ ಕಚೇರಿಗೆ ಬಂದು ಸರಿಯಾದ ಮಾಹಿತಿ ಪಡೆಯಲಿ. ಯಾವ ಯಾವ ಕಂಪನಿಯ ಮೂಲಕ ಅವರು ಅಕ್ರಮ ನಡೆಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತೇವೆ.
ರೆಡ್ಡಿ ಸೋದರರು ಆಂಧ್ರದಲ್ಲೇ ಗಣಿಗಾರಿಕೆ ನಡೆಸಿದರೂ ಅದಿರು ರಫ್ತು ಹಾಗೂ ಶೇಖರಣೆ ಆಗುತ್ತಿದ್ದದ್ದು ಸಿಂಗಪುರದ ಕಚೇರಿಯಲ್ಲಿ ಎಂಬುದನ್ನು ಮೊದಲು ಗಮನಿಸಲಿ ಎಂದು ಲೋಕಾಯುಕ್ತರು ಹೇಳಿದ್ದಾರೆ. ಈ ನಡುವೆ ಲೋಕಾಯುಕ್ತರ ವರದಿ ಸಲ್ಲಿಕೆ ವಿಳಂಬದ ಬಗ್ಗೆ ಕೂಡಾ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.