ಟೆಲಿಕಾಂ ಖಾತೆ ಹೊತ್ತಿದ್ದ ವಾಜಪೇಯಿಯೂ ಕಳಂಕಿತರೇ
ಇದೇ ವೇಳೆ, ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಜಾರಿಗೆ ತಂದ ವಲಸೆ ನೀತಿಯಿಂದಾಗಿ ರಾಷ್ಟ್ರದ ಬೊಕ್ಕಸಕ್ಕೆ 43,000 ಕೋಟಿ ರೂಪಾಯಿ ನಷ್ಟವಾಯಿತು ಎಂದು ಅವರು ಮತ್ತೊಂದು ಪ್ರಹಾರ ಮಾಡಿದ್ದಾರೆ.
ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಹೇಳಿಕೆಗೆ ಅಷ್ಟೊಂದು ಪ್ರಾಮುಖ್ಯ ನೀಡಿದ್ದೇ ಆದರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ 2 ಜಿ ತರಂಗಾಂತರ ಹಗರಣದಲ್ಲಿ ಕಳಂಕಿತನ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎನ್ನುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
'ತರಂಗಾಂತರ ಪರವಾನಗಿ ಪಡೆದಿದ್ದ ಸ್ವಾನ್ ಮತ್ತು ಯುನಿಟೆಕ್ ಕಂಪನಿಗಳ ಷೇರು ಮಾರಾಟದ ಬಗ್ಗೆ ಮನಮೋಹನ್ ಸಿಂಗ್ ಮತ್ತು ಚಿದಂಬರಂ ನಡುವೆ ಚರ್ಚೆ ನಡೆದಿತ್ತು' ಎಂಬ ರಾಜಾ ಅವರ ಹೇಳಿಕೆ ಹಿನ್ನೆಲೆಯಲ್ಲಿ, ಈ ಇಬ್ಬರೂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು.
ತಾವು ಅನುಸರಿಸಿದ ನೀತಿ ತಪ್ಪು ಎನ್ನುವುದಾದರೆ 1993ರ ನಂತರ ದೂರ ಸಂಪರ್ಕ ಸಚಿವರಾದವರೆಲ್ಲರ ನೀತಿಗಳು ಕೂಡ ತಪ್ಪೇ ಆಗಿರುತ್ತವೆ ಎಂದು ರಾಜಾ ಸೋಮವಾರ ವಿಚಾರಣೆ ವೇಳೆ ಹೇಳಿದ್ದರು. ಹಾಗಿದ್ದರೆ, 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಜಗಮೋಹನ್ ಅವರಿಂದ ದೂರಸಂಪರ್ಕ ಖಾತೆಯನ್ನು ವಹಿಸಿಕೊಂಡಿದ್ದ ವಾಜಪೇಯಿ ಕೂಡ ತಪ್ಪಿತಸ್ಥರು ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ನೆನಪಿಸಿದ್ದಾರೆ.