ನಡುಗಡ್ಡೆಯಂತಾಗಿರುವ ನೀಲಕಂಠರಾಯ ಗಡ್ಡಿ ಗ್ರಾಮ
ಅಭಿವೃದ್ಧಿ ಅಭಿವದ್ಧಿ ಎಂದು ಸರಕಾರ ಬೊಂಬಡಾ ಹೊಡೆಯುತ್ತಿರುವ ಸಂದರ್ಭದಲ್ಲಿ ಈ ಗ್ರಾಮಕ್ಕೆ ಇಲ್ಲಿಯವರೆಗೂ ರಸ್ತೆ ಹಾಗೂ ಸೇತುವೆ ಕಲ್ಪಿಸಲಾಗಿಲ್ಲ. ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿದುಹೋಗಿದೆ, ಮೊಬೈಲ್ಗಳು ನಾಟ್ ರಿಚೇಬಲ್ ಆಗಿವೆ.
ಈ ಗ್ರಾಮಸ್ಥರು ಸೀಟಿ ಕೇಕೆಗಳನ್ನು ಹೊಡೆಯುತ್ತ, ಹಾಗೂ ಬೆಂಕಿ ಹಚ್ಚಿದ ಜಾಗದಲ್ಲಿ ನಾವಿದ್ದೇವೆ, ನಮ್ಮನ್ನು ಇಲ್ಲಿಂದ ರಕ್ಷಿಸಿ ಎಂದು ದೂರದ ನದಿ ತೀರದ ದಡದಿಂದ ಕರೆಯುತ್ತಿದ್ದಾರೆ. ಸರಕಾರವೇ ಮುಳುಗುವ ಹಂತದಲ್ಲಿರುವಾಗ ಇವರ ಕೂಗನ್ನು ಕೇಳುವವರಾದರೂ ಯಾರು?
ಈ ಗ್ರಾಮದಲ್ಲಿ ಸುಮಾರು 50 ಮನೆಗಳಿದ್ದು, 250 ಜನಸಂಖ್ಯೆ ಇದೆ. ಸಮಾರು ವರ್ಷಗಳಿಂದ ಈ ರೀತಿ ನಡುಗಡ್ಡೆಯಾಗಿಯೇ ಉಳಿದಿದೆ. ಜನರು ಆಚೆಗೆ ಬರಬೇಕಾದರೆ ಈಜಿಕೊಂಡು ಇನ್ನೊಂದು ದಡಕ್ಕೆ ಬರುತ್ತಾರೆ. 1ರಿಂದ 2 ತಂಗಳಿಗಾಗೂವಷ್ಟು ಮನೆಗೆ ಬೇಕಾದ ಸಾಮಾನುಗಳನ್ನು ಸಮೀಪದ ಕಕ್ಕೆರಾ ಗ್ರಾಮಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ.
ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ನೀರು ಹರಿದು ಬಿಟ್ಟ ಪರಿಣಾಮ ಈ ಗ್ರಾಮಸ್ಥರು 3 ದಿನಗಳಿಂದ ಹೊರ ಪ್ರಪಂಚದ ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ಒಟ್ಟಾರೆಯಾಗಿ ಜನಪ್ರತಿನಿಧಿ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ನಿಲಕಂಠರಾಯನ ಗಡ್ಡಿಯ ಗ್ರಾಮಸ್ಥರೂ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಅದ್ಯಾವಾಗ ಈ ಗ್ರಾಮಸ್ಥರನ್ನು ರಕ್ಷಿಸುತ್ತಾರೂ ಎನ್ನುವುದನ್ನು ನಾವು ಕಾದು ನೋಡಬೇಕಿದೆ.