ಸುರೇಶ್ ಕಲ್ಮಾಡಿ ಸ್ಮರಣ ಶಕ್ತಿ ಢಮಾರ್, ಕೇಸ್ ಗತಿ ಅಷ್ಟೇ!
ಎರಡು ತಿಂಗಳಿನಿಂದ ತಿಹಾರ್ ಜೈಲಿನಲ್ಲಿರುವ ಪುಣೆ ಮಾಜಿ ಸಂಸದ ಮತ್ತು ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಬುದ್ಧಿಮಾಂದ್ಯತೆ ರೋಗದಿಂದ ಬಳಲುತ್ತಿರುವುದು ಖಚಿತವಾಗಿದೆ.
66 ವರ್ಷದ ಸುರೇಶ್ ಕಲ್ಮಾಡಿ ಅವರಿಗೆ ಮರೆವಿನ ರೋಗ ಪ್ರಾಥಮಿಕ ಹಂತದಲ್ಲಿದ್ದು, ಮುಂದೆ ಅವರು ತಮ್ಮ ಸ್ಮರಣ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ವ್ಯಕ್ತಿತ್ವ ಕೂಡಾ ಆಗಾಗ ಬದಲಾಗುತ್ತಿದೆ.
ಕಲ್ಮಾಡಿ ಅವರ ಈ ರೋಗ ಕಾಮನ್ ವೆಲ್ತ್ ಹಗರಣದ ವಿಚಾರಣೆ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನಾರಾಯಣ್ ಜಯಪ್ರಕಾಶ್ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
ಕಲ್ಮಾಡಿಯ ವೈದ್ಯಕೀಯ ಪರೀಕ್ಷಾ ವರದಿಗಳು ಅವರಿಗೆ ಡಿಮ್ನೀಷಿಯಾ ಆಗಿದೆ ಎಂದು ಸೂಚಿಸುತ್ತಿದೆ. ಇದು ನಿಧಾನವಾಗಿ ವ್ಯಕ್ತಿಯ ಮೆದುಳಿನ ಕಾರ್ಯವನ್ನೇ ಬದಲಿಸುತ್ತದೆ ಎಂದು ತಿಹಾರ್ ಜೈಲಿನ ಡಿಐಜಿ ಆರ್.ಎನ್. ಶರ್ಮ ಹೇಳಿದ್ದಾರೆ.
ಈ ಮಧ್ಯೆ ಕಲ್ಮಾಡಿ ಅವರಿಗೆ ಕಳೆದ 4-5 ವರ್ಷಗಳಿಂದ ಈ ಖಾಯಿಲೆಯಿಂದ ಬಳಲುತ್ತಿದ್ದು, ನಾವು ಜೈಲು ಮತ್ತು ತನಿಖಾ ಸಂಸ್ಥೆಗಳಿಗೆ ತಿಳಿಸಿದ್ದೆವು ಎಂದು ಕಲ್ಮಾಡಿ ಪರ ವಕೀಲ ಹಿತೇಶ್ ಜೈನ್ ಹೇಳಿದ್ದಾರೆ.