ಸುಪ್ರೀಂಕೋರ್ಟಿನಲ್ಲಿ 2ಜಿ ಬಾಂಬ್ ಎಸೆದ ತಿಹಾರದ ಕೈದಿ
ಹಗರಣದ ಪ್ರಧಾನ ಸೂತ್ರಧಾರ ಎನಿಸಿರುವ ರಾಜಾ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ಕೈಗೆತ್ತಿಕೊಂಡಾಗ ನ್ಯಾಯವಾದಿಯೂ ಆಗಿರುವ ರಾಜಾ ತಮ್ಮ ಪರ ಸ್ವಯಂ ವಕಾಲತ್ತುವಹಿಸಿದರು.
ಕುತೂಹಲಕಾರಿ ಸಂಗತಿಯೆಂದರೆ ವಿಚಾರಣೆಯ ಒಂದು ಹಂತದಲ್ಲಿ ರಾಜಾ , ನಾನು ಹಿಂದಿನ ಕಾನೂನನ್ನು ಚಾಚೂತಪ್ಪದೆ ಪಾಲಿಸಿದ್ದೇನೆ ಅಷ್ಟೇಯಾ. ಅಂತಹುದರಲ್ಲಿ ನನ್ನೊಬ್ಬನ ವಿಚಾರಣೆ ಯಾಕೆ? ಅದರ ಬದಲು ನನಗೆ ಬಹುಮಾನ ನೀಡುವುದು ಸೂಕ್ತ ಎಂದೂ ನ್ಯಾಯಾಲಯದ ಗಮನಸೆಳೆದರು.
ಹಗರಣಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ತಪ್ಪು ಮಾಡಿಲ್ಲ. ಹಿಂದಿನ ಸರಕಾರಗಳಲ್ಲಿದ್ದ ಸಚಿವರು ಮತ್ತು ಎನ್ ಡಿಎ ಸರಕಾರ ಅಳವಡಿಸಿಕೊಂಡಿರುವ ನೀತಿಗಳಿಗೆ ಅನುಗುಣವಾಗಿ ನಾನು ನಡೆದುಕೊಂಡಿರುವೆ ಅಷ್ಟೆ. ಕಾರ್ಪೊರೇಟ್ ನೀತಿಗೆ ತಕ್ಕಂತೆ ವಿದೇಶಿ ಬಡವಾಳವನ್ನು ಆಕರ್ಷಿಸಲು ಸ್ವಾನ್ ಮತ್ತು ಯುನಿಟೆಕ್ ಕಂಪನಿಗಳಿಗೆ ಅವಕಾಶ ನೀಡಿದ್ದೆ.
ಈ ಕಂಪನಿಗಳ ಈಕ್ವಿಟಿ ಮಾರಾಟ ಕಾನೂನುಬಾಹಿರ ಅಗುವುದಿಲ್ಲ ಎಂದು ಸ್ವತಃ ಹಣಕಾಸು ಸಚಿವರೇ (ಪಿ.ಚಿದಂಬರಂ) ನನಗೆ ಹೇಳಿದರು. ಇದನ್ನು ಸಾಕ್ಷಾತ್ ಪ್ರಧಾನಿ ಸಿಂಗ್ ಅವರ ಸಮ್ಮುಖದಲ್ಲಿಯೇ ಹೇಳಿದ್ದರು ಎಂದು ರಾಜಾ ತಮ್ಮ ವಾದ ಮಂಡಿಸಿದರು. ಇದನ್ನು ಬೇಕಾದರೆ ಪ್ರಧಾನಿ ಸಿಂಗ್ ಅಲ್ಲಗೆಳೆಯಲಿ ಎಂದು ಡಿಎಂಕೆ ಸಂಸದ, 47 ವರ್ಷದ ರಾಜಾ ಸವಾಲು ಹಾಕಿದರು.
ಈ ಹಿನ್ನೆಲೆಯಲ್ಲಿ ನಾನು ತಪ್ಪು ಮಾಡಿರುವೆ ಎಂದಾದರೆ 1993ರಿಂದ ದೂರಸಂಪರ್ಕ ಸಚಿವರಾಗಿದ್ದವರನ್ನೆಲ್ಲ ಕಾನೂನುಪರಿಧಿಗೆ ತರಬೇಕು ಎಂದೂ ಅವರು ಕೋರ್ಟ್ ಗಮನ ಸೆಳೆದರು.
ಅರುಣ್ ಶೌರಿ 25 ಲೈಸೆನ್ಸುಗಳನ್ನು ನೀಡಿದ್ದರು. ಆನಂತರ ದಯಾನಿಧಿ ಮಾರನ್ 25 ವಿತರಿಸಿದರು. ನಾನು 122 ಲೈಸೆನ್ಸ್ ನೀಡಿದೆ. ಇಲ್ಲಿ ಸಂಖ್ಯೆಗಳು ಪ್ರಧಾನವಾಗುವುದಿಲ್ಲ. ಆದರೆ ಮುಖ್ಯ ವಿಷಯವೆಂದರೆ ಅವರು ಯಾರೂ ಹಾಜು ಪ್ರಕ್ರಿಯೆ ಮೂಲಕ ಈ ಲೈಸೆನ್ಸುಗಳನ್ನು ವಿತರಿಸಿಲ್ಲ ಎಂದು ರಾಜಾ ನ್ಯಾಯಾಲಯಕ್ಕೆ ಮನದಟ್ಟುಪಡಿಸಿದರು.
ಹಿನ್ನೆಲೆ ಹೀಗಿರುವಾಗ ಅವರದ್ದು ಯಾರದೂ ತಪ್ಪಿಲ್ಲ ಎನ್ನುವುದಾದರೆ ನನ್ನನ್ನು ಯಾಕೆ ಪ್ರಶ್ನಿಸುತ್ತೀರಿ. 2003ರಲ್ಲಿ ಸಂಪುಟ ತೆಗೆದುಕೊಂಡಿದ್ದ ತೀರ್ಮಾನವನ್ನು ಚಾಚೂತಪ್ಪದೆ ನಾನು ಪಾಲಿಸಿದ್ದೇನೆ ಅಷ್ಟೇಯಾ. ನಾನು ಹಿಂದಿನ ಕಾನೂನನ್ನು ಪಾಲಿಸುತ್ತಿದ್ದೇನೆ ಎನ್ನುವುದಾದರೆ ನಾನು ವಿಚಾರಣೆಗೆ ಒಳಪಡುವ ಜರೂರತ್ತು ಇಲ್ಲ. ವಾಸ್ತವವಾಗಿ ನನ್ನ ನೀತಿಯಿಂದಾಗಿಯೇ ಇಂದು ದೇಶದಲ್ಲಿ ಮನೆಗೆಲಸ ಮಾಡುವ ಮಹಿಳೆಯರು, ಆಟೊ ಚಾಲಕರು ಸಹ ಮೊಬೈಲ್ ಫೋನ್ ಬಳಸುವಷ್ಟು ಅಗ್ಗವಾಗಿದೆ. ಇದಕ್ಕಾಗಿ ನನಗೆ ಬಹುಮಾನವನ್ನೂ ನೀಡಬೇಕು ಎಂದೂ ಅವರು ಹೇಳಿದರು.
2ಜಿ ಹಗರಣದಲ್ಲಿ ವಂಚನೆ, ಫೋರ್ಜರಿ ಮತ್ತು ಅಪರಾಧ ಪಿತೂರಿ ನಡೆಸಿದ ಆರೋಪದಲ್ಲಿ ರಾಜಾನನ್ನು ಆರೋಪಿಯನ್ನಾಗಿಸಿ, ಫೆಬ್ರವರಿ 2ರಂದು ಬಂಧಿಸಲಾಗಿತ್ತು. ವಾದ-ಪ್ರತಿವಾದ ಇನ್ನೂ ನಡೆದಿದೆ.
ಜುಲೈ 21ರಿಂದ 23ರವರೆಗೆ ರಾಜಾ ವಿರುದ್ಧ ಆರೋಪ ದಾಖಲಿಸಿದ ಸಿಬಿಐ, ರಾಜಾ ಸೇರಿದಂತೆ 16 ವ್ಯಕ್ತಿಗಳು, ಹಾಗೂ ಮೂರು ಕಂಪನಿಗಳ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ. ಡಿಎಂಕೆ ಸಂಸದೆ ಕನಿಮೋಳಿ ಸೇರಿದಂರೆ ಎಲ್ಲ 14 ಆರೋಪಿಗಳು ಪ್ರಸ್ತುತ ತಿಹಾರ್ ಜೈಲಿನಲ್ಲಿ ದಿನದೂಡುತ್ತಿದ್ದಾರೆ.