ಬೆಂಗಳೂರು ಗೃಹ ಮಂಡಳಿಯಿಂದ 4 ಹೊಸ ಬಡಾವಣೆ
ಬಿಡದಿ ಬಳಿ 400 ಎಕರೆ, ದೇವನಹಳ್ಳಿ ಸಮೀಪದ ಅಡ್ಡೆವಿಶ್ವನಾಥಪುರದಲ್ಲಿ 420 ಎಕರೆ, ದೊಡ್ಡಆಲದಮರ ಬಳಿ 1,000 ಎಕರೆ ಜಮೀನು ಗುರುತಿಸಲಾಗಿದೆ. ಇದಲ್ಲದೆ ಸೂರ್ಯನಗರ ಮೂರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಬಡಾವಣೆಗಳ ನಿರ್ಮಾಣಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.
ಎಲ್ಲ ನಗರಗಳ ಸುತ್ತ ಇದೇ ರೀತಿ ಗೃಹ ಮಂಡಳಿಯಿಂದ ಬಡಾವಣೆಗಳನ್ನು ನಿರ್ಮಿಸುವ ಬಗ್ಗೆ ಚಿಂತನೆ ನಡೆದಿದೆ. 2012ರ ಮಾರ್ಚ್ನಲ್ಲಿ ಪೂರ್ಣಗೊಳ್ಳಬೇಕಿದ್ದ ನರ್ಮ್ ಯೋಜನೆಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಈ ಯೋಜನೆಯಡಿ ಬೆಂಗಳೂರು, ಮೈಸೂರಿನಲ್ಲಿ 48 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, 24 ಸಾವಿರ ಮನೆಗಳು ಪೂರ್ಣಗೊಂಡಿವೆ. 16 ಸಾವಿರ ಮನೆ ನಿರ್ಮಾಣ ಕಾರ್ಯ ವಿವಿಧ ಹಂತದಲ್ಲಿದ್ದು 2012ರ ಡಿಸೆಂಬರ್ ಗೆ ಪೂರ್ಣಗೊಳ್ಳಲಿವೆ ಎಂದರು.
ರಾಜೀವ್ ಅವಾಸ್ ಯೋಜನೆ ಸದ್ಯ ಬೆಂಗಳೂರು, ಮೈಸೂರಿನಲ್ಲಿ ಮಾತ್ರ ಜಾರಿಯಲ್ಲಿದ್ದು, ಉಳಿದ ಮಹಾನಗರ ಪಾಲಿಕೆಗಳಿಗೂ ವಿಸ್ತರಿಸಲಾಗುವುದು. ಕೊಳೆಗೇರಿಗಳಲ್ಲಿ 8 ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಪ್ರತಿಯೊಂದು ಮನೆಗೆ 3.4 ಲಕ್ಷ ರೂಪಾಯಿ ವೆಚ್ಚ ಮಾಡಲಾಗುವುದು. ಇದಕ್ಕೆ ತಗಲುವ ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ 50ರಷ್ಟನ್ನು ಭರಿಸಲಿವೆ ಎಂದು ಅವರು ವಿವರಿಸಿದ್ದಾರೆ.