ಕೊರಿಯಾ ಟೇಕ್ವಾಂಡೋ : ಬೆಂಗಳೂರು ಬಾಲೆಗೆ ಎರಡು ಸ್ವರ್ಣ
ಬಸವೇಶ್ವರನಗರದ ಶ್ರೀ ವಾಣಿ ವಿದ್ಯಾಕೇಂದ್ರದಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರಕ್ಷಾ ನಾಗೇಂದ್ರ 13 ವರ್ಷದೊಳಗಿನ ಬಾಲಕಿಯರ ಪ್ರವರ್ಗದಡಿಯಲ್ಲಿ ಕ್ಯೋರುಗಿ ಮತ್ತು ಪೂಮ್ಸೆ ಬ್ಲೂ ಬೆಲ್ಟ್ನಲ್ಲಿ ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.
ಕರ್ನಾಟಕವನ್ನು ಪ್ರತಿನಿಧಿಸಿದ್ದ ಏಳು ಸ್ಪರ್ಧಿಗಳಲ್ಲಿ ಐವರು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಹತ್ತು ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬಿ.ವಿ. ಯಶ್ಪ್ರೀತ್ ಅವರು ಪ್ಯೂಮ್ಸೆ ಬ್ಲೂ ಬೆಲ್ಟ್ನಲ್ಲಿ ಸ್ವರ್ಣ ಪದಕ ಹಾಗೂ ಕ್ಯೋರುಗಿಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
25 ವರ್ಷದ ವಯೋಮಾನದೊಳಗಿನ ಮಹಿಳಾ ವಿಭಾಗದಲ್ಲಿ ಮಾಧುರಿ ಮುನಿರತ್ನಮ್ ಅವರು ಕ್ಯೋರುಗಿಯಲ್ಲಿ ಸ್ವರ್ಣ ಪದಕ ಹಾಗೂ ಪ್ಯೂಮ್ಸೆ ಬ್ಲೂ ಬೆಲ್ಟ್ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಹದಿನಾರು ವರ್ಷದ ಪುರುಷರ ವಿಭಾಗದಲ್ಲಿ ನಿಖಿಲ್ ಎನ್ ಜೈನ್ ಪ್ಯೂಮ್ಸೆ ಬ್ಲೂಬೆಲ್ಟ್ ಹಾಗೂ ಕ್ಯೋರುಗಿಯಲ್ಲಿ ತಲಾ ಒಂದು ರಜತ ಪದಕ ಗಳಿಸಿದ್ದಾರೆ.
ಹತ್ತು ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ತೇಜಲ್ ಆಲ್ವಿನ್ ಮೆನೆಜಸ್ ಪೂಮ್ಸೆ ಎಲ್ಲೋ ಬೆಲ್ಟ್ ಹಾಗೂ ಕ್ಯೋರುಗಿಯಲ್ಲಿ ತಲಾ ಒಂದು ರಜತ ಪದಕವನ್ನು ಪಡೆದಿದ್ದಾರೆ. ಕರ್ನಾಟಕ ಏಳು ಮಂದಿಯೂ ಸೇರಿದಂತೆ ಭಾರತದ 28 ಸದಸ್ಯರ ತಂಡದ ನೇತೃತ್ವವನ್ನು ಟೇಕ್ವಾಂಡೋ ಅಸೋಸಿಯೇಷನ್ ಆಫ್ ಕರ್ನಾಟಕದ ಬಿ.ಎಂ. ಕೃಷ್ಣಮೂರ್ತಿ ಅವರು ವಹಿಸಿದ್ದರು.