ಬೊಗಳೋ ನಾಯಿಗಳ ನಿಯಂತ್ರಣ ಬಿಬಿಎಂಪಿಗೆ ಸೇರಿದ್ದು
ಈ ರೀತಿ ಬೊಗಳೋ ನಾಯಿಗಳಿಗೆ ನಾನು ಉತ್ತರಿಸಬೇಕಿಲ್ಲ. ಅವುಗಳನ್ನು ನಿಯಂತ್ರಿಸುವುದು ಬಿಬಿಎಂಪಿ ಕೆಲಸ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆತ ಏನು ಬಹಿರಂಗ ಮಾಡುತ್ತಾನಂತೆ? ನಾನು ಸುಪ್ರೀಂಕೋರ್ಟ್ ಜಡ್ಜ್ ಆಗಿದ್ದು ಹೇಗೆ ಎಂಬುದೇ? ಅದು ಎಲ್ಲರಿಗೂ ಗೊತ್ತಿರುವ ವಿಷಯ.
ಟೀಕಾಕಾರದಲ್ಲಿ ಹರಿಪ್ರಸಾದ್ ಮೊದಲಿಗರಲ್ಲ, ವೀರಪ್ಪ ಮೊಯ್ಲಿ, ಜನಾರ್ಧನ ಪೂಜಾರಿ, ದಿಗ್ವಿಜಯ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ಪಟ್ಟಿಯಲ್ಲಿ ಸೇರಿದ್ದಾರೆ. ಜನ ಲೋಕಪಾಲ್ ವಿಧೇಯಕ ಆಯೋಗದಲ್ಲಿ ನಾನು ಸೇರಿದ ಮೇಲೆ ಅನಗತ್ಯವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸಂತೋಷ್ ಹೆಗ್ಡೆ ಹೇಳಿದರು.
ಧನಂಜಯ್ ಕುಮಾರ್ ಹಾಗೂ ವಿಎಸ್ ಆಚಾರ್ಯ ಭೇಟಿ ಮಾಡಿದ್ದು ನಿಜ. ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ಇದ್ದ ಅವಕಾಶವನ್ನು ಬಿಜೆಪಿ ಸರ್ಕಾರ ಹಾಳುಗೆಡವಿಕೊಂಡ ಪರಿಣಾಮ ಈಗ ಎದುರಿಸುತ್ತಿದೆ ಎಂದು ಹೆಗ್ಡೆ ಹೇಳಿದರು.
ಇದಕ್ಕೂ ಮುನ್ನ ಸಂತೋಷ್ ಹೆಗ್ಡೆ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಅವರ ಕೈವಾಡ ಇಲ್ಲದೆ ವರದಿ ಸೋರಿಕೆ ಹೇಗೆ ಸಾಧ್ಯ? ಬಿಜೆಪಿ ನಾಯಕರ ಭೇಟಿ ವಿಷಯ ಇಷ್ಟು ದಿನ ಮುಚ್ಚಿಟ್ಟಿದ್ದು ಯಾಕೆ? ರಾಜಕೀಯ ನಾಯಕರಂತೆ ವರ್ತಿಸುವ ಪ್ರಚಾರ ಪ್ರಿಯ ಲೋಕಾಯುಕ್ತ ಹೆಗ್ಡೆ ಅವರ ಪೂರ್ವಾಶ್ರಮದ ಎಲ್ಲಾ ರಹಸ್ಯ ಬಹಿರಂಗಗೊಳಿಸುತ್ತೇನೆ. ಅವರು ಅಧಿಕಾರದಿಂದ ಕೆಳಗಿಳುವುದನ್ನು ಕಾಯುತ್ತಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದರು.