ಕುಕ್ಕೆ ಸುಬ್ರಮಣ್ಯ ದೇಗುಲ ಟ್ರಸ್ಟ್ ತೆರಿಗೆ ವಂಚಿಸುವುದು ಸರಿಯೇ?
ಟ್ರಸ್ಟ್ ನಿಂದ ತೆರಿಗೆ ವಂಚನೆ ಮಾಡಲಾಗಿದೆ ಎಂದು ಎದ್ದೆದ್ದ ಕೂಗು ಈಗ ತಣ್ಣಗಾಗಿದೆ. ಹೊರಗೆ ಸುರಿವ ಭರ್ಜರಿ ನಡುವೆ ದೇಗುಲದ ಆಡಳಿತಾಧಿಕಾರಿ ಹರೀಶ್ ಸ್ಪಷ್ಟಣೆ ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಳವು ಎಷ್ಟು ತೆರಿಗೆ ಕಟ್ಟಬೇಕು ಎಂಬುದನ್ನು ಗ್ರಾಮ ಪಂಚಾಯತಿಯೇ ನಿರ್ಧರಿಸಲಿ. ತೆರಿಗೆ ಕಟ್ಟಲು ಟ್ರಸ್ಟ್ ಸಿದ್ಧ ಎಂದು ದೇವಳದ ಆಡಳಿತಾಧಿಕಾರಿ ಹಾಗೂ ಪುತ್ತೂರು ಸಹಾಯಕ ಆಯುಕ್ತ ಹರೀಶ್ ಕುಮಾರ್ ತಿಳಿಸಿದ್ದಾರೆ.
ಜನಾಂದೋಲನ ಮೂಲಕ ತೆರಿಗೆ ವಸೂಲಿ ಸಾಧುವಲ್ಲ. ಗ್ರಾಮ ಪಂಚಾಯತಿ ಹೈಕೋರ್ಟಿನ ನಿರ್ದೇಶನ ಪಾಲಿಸದೆ ಪತ್ರಿಕೆಗಳಿಗೆ ಹೇಳಿಕೆ ನೀಡಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದರು.
ಆಶ್ಲೇಷಾ ವಸತಿಗೃಹಕ್ಕೆ ಸಂಬಂಧಿಸಿ ರೂ. 4.5 ಲಕ್ಷ ತೆರಿಗೆ ಕಟ್ಟುವಂತೆ 2008ರ ಜುಲೈ 28ರಂದು ನ್ಯಾಯಾಲಯ ನೋಟಿಸ್ ನೀಡಿತ್ತು. ಈ ಕುರಿತು ದೇವಾಲಯ, ನಮ್ಮದು ಧರ್ಮಾದಾಯ ಸಂಸ್ಥೆ. ಲಾಭದ ದೃಷ್ಟಿಯಿಲ್ಲ.
ಆದ್ದರಿಂದ ತೆರಿಗೆಗೆ ವಿನಾಯತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ದೇವಳದ ದಾಖಲೆಗಳನ್ನು ಪರಿಶೀಲಿಸಿ ತೆರಿಗೆ ವಿಷಯ ನಿರ್ಧರಿಸುವಂತೆ ನ್ಯಾಯಾಲಯ ಪಂಚಾಯತಿಗೆ ನಿರ್ದೇಶಿಸಿತ್ತು. ಆದರೆ ಗ್ರಾಮ ಪಂಚಾಯತ್ ದೇವಳಕ್ಕೆ ತೆರಿಗೆ ವಿಧಿಸಿದ ಅಥವಾ ವಿನಾಯತಿ ನೀಡುವ ವಿಚಾರವನ್ನು ಇನ್ನೂ ಆದೇಶದ ಮೂಲಕ ತಿಳಿಸಿಲ್ಲ ಎಂದು ಹರೀಶ್ ತಿಳಿಸಿದರು.