ರೈತರ ರಸಗೊಬ್ಬರ ಅಮೋನಿಯಂ ನೈಟ್ರೇಟಿಗೆ ನಿಷೇಧ?
ಅಮೋನಿಯಂ ನೈಟ್ರೇಟ್ ಬಳಕೆ ಮತ್ತು ಸಾಗಣೆ ಮೇಲೆ ಸ್ಫೋಟಕ ವಸ್ತು ಕಾಯ್ದೆಯಡಿ ನಿಯಂತ್ರಣ ಹೇರಲು ಸರಕಾರ ನಿರ್ಧರಿಸಿದ್ದು, ಈ ಸಂಬಂಧ ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಸೂದೆಯೊಂದನ್ನು ಮಂಡಿಸಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಲ್ಲಿ ಜು 13ರಂದು ನಡೆದ ಸರಣಿ ಸ್ಫೋಟ ಸೇರಿದಂತೆ ದೇಶದಲ್ಲಿ ನಡೆದಿರುವ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಯೋತ್ಪಾದಕ ಸಂಘಟನೆಗಳು ಅಮೋನಿಯಂ ನೈಟ್ರೇಟ್ ಬಳಕೆ ಮಾಡಿರುವುದನ್ನು ಕೇಂದ್ರದ ಭದ್ರತಾ ಪಡೆಗಳು ದೃಢಪಡಿಸಿದೆ. ದೆಹಲಿ, ಅಹಮದಾಬಾದ್, ಬೆಂಗಳೂರು ಮುಂತಾದ ಕಡೆ ಸ್ಫೋಟಕ್ಕೂ ಅಮೋನಿಯಂ ನೈಟ್ರೇಟ್ ಕಚ್ಚಾ ವಸ್ತು ವಾಗಿತ್ತು.
ನಿಷೇಧ ಕೃಷಿಗೆ ಮಾರಕವಾದರೆ?: ಸದ್ಯಕ್ಕೆ ಅಮೋನಿಯಂ ನೈಟ್ರೇಟ್ ಸ್ಫೋಟಕ ವಸ್ತು ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಸೇರಿಲ್ಲ. ನಿಷೇಧಕ್ಕೂ ಮುನ್ನ ಸ್ಫೋಟಕಗಳ ಮಾರಾಟ, ಶೇಖರಣೆ, ಸಾಗಣೆ ಹಾಗೂ ಉತ್ಪಾದನೆ ಮೇಲೆ ನಿಯಂತ್ರಣ ಹೇರಲಾಗುವುದು. ರಾಸಾಯನಿಕಗಳು ಸುಲಭವಾಗಿ ಉಗ್ರರ ಕೈ ಸೇರದಂತೆ ವ್ಯವಸ್ಥೆ ನಿರ್ಮಿಸಲಾಗುವುದು. ಅಮೋನಿಯಂ ನೈಟ್ರೇಟ್ ಬದಲಿಗೆ ಬೇರೆ ರಸಗೊಬ್ಬರಗಳನ್ನು ರೈತರು ಬಳಸಬಹುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.