ಮೈಸೂರು ಅರಮನೆ-ಕೆಆರ್ಎಸ್ಗೆ ಬಿಗಿ ಭದ್ರತೆ
ಮೈಸೂರು ನಗರ ಪೊಲೀಸ್ ಕಮಿಷ್ನರ್ ಸುನಿಲ್ ಅಗರವಾಲ್ ಅವರು ಸೂಕ್ತ ಕ್ರಮಕೈಗೊಂಡಿದ್ದು, ಮೈಸೂರು ಅರಮನೆ, ಜಗನ್ಮೋಹನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಹಾಗೂ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಪ್ರದೇಶಗಳಲ್ಲಿ ಸಶಸ್ತ್ರಧಾರಿ ಪೊಲೀಸರನ್ನು ನಿಯೋಜಿಸಿದ್ದಾರೆ. ಅಲ್ಲದೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿಯೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರವಾಸಿಗರ ತಪಾಸಣೆ : ಅರಮನೆಗೆ ಭೇಟಿ ನೀಡುವ ಪ್ರವಾಸಿಗರನ್ನು ತಪಾಸಣೆಗೊಳಪಡಿಸಿದ ನಂತರ ಒಳಗೆ ಪ್ರವೇಶ ನೀಡಲಾಗುತ್ತಿದೆ. ಪ್ರತಿಯೊಬ್ಬರ ಬ್ಯಾಗ್, ಮೊಬೈಲ್, ಕ್ಯಾಮೆರಾವನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ವಾಹನಗಳ ನೋಂದಣಿ ಸಂಖ್ಯೆ ವಿಳಾಸವನ್ನು ಸಂಗ್ರಹಿಸಲಾಗುತ್ತಿದೆ. ನಗರಕ್ಕೆ ಆಗಮಿಸುವ ಹಾಗೂ ಹೊರಹೋಗುವ ವಾಹನಗಳ ಮೇಲೂ ನಿಗಾ ವಹಿಸಲಾಗಿದೆ.
ಮೈಸೂರಿನಲ್ಲಿ ಭದ್ರತೆಗಾಗಿ 4 ಕೆಎಸ್ಆರ್ಪಿ, 4 ಸಿಎಆರ್, 4 ಮೌಂಟೆಡ್ ಕಂಪನಿ, 8 ಕಮಾಂಡೋ ಪಡೆಯಲ್ಲದೆ, 14 ಪಿಸಿಆರ್ ಮೊಬೈಲ್ ವಾಹನ, ಚೀತಾ, ಕೋಬ್ರಾ ಹಾಗೂ ಗರುಡ ವಾಹನಗಳನ್ನು ನಿಯೋಜಿಸಲಾಗಿದೆ.
ಕೆಆರ್ಎಸ್ಗೆ ಬಿಗಿ ಭದ್ರತೆ : ಕೆಆರ್ಎಸ್ಗೆ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದ್ದು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ವಾಹನಗಳ ಪ್ರವೇಶ ದ್ವಾರದಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೆ ಎಲ್ಲಾ ಕಡೆಗಳಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.