ರಾಸಲೀಲೆ- ಸನ್ ಟಿವಿಯನ್ನು ನಿತ್ಯಾನಂದ ಸ್ವಾಮಿಯೇ ಕಾಪಾಡಬೇಕು!
ಸನ್ ಟಿವಿಯ ಹಂಸರಾಜ್ ಸಕ್ಸೇನಾ ಮತ್ತು ಇತರ 8 ಮಂದಿಯ ವಿರುದ್ಧ ಸ್ವಾಮಿ ನಿತ್ಯಾನಂದ ಮತ್ತೆ ಕ್ರಿಮಿನಲ್ ದಾವೆ ಹೂಡಿದ್ದಾರೆ. ಸನ್ ಟಿವಿ ನೆಟ್ವರ್ಕ್ ವಿರುದ್ಧ ನಿತ್ಯಾನಂದ ಸ್ವಾಮಿ ಮತ್ತು ಅವರ ಆಶ್ರಮದ ವತಿಯಿಂದ ಈ ರೀತಿ ದೂರು ಸಲ್ಲಿಸುತ್ತಿರುವುದು ಇದು ಎರಡನೆಯ ಬಾರಿಯಾಗಿದೆ. ಈ ಮದ್ಯೆ, ನಟಿ ರಂಜಿತಾ ಕೂಡ ನಿನ್ನೆಯಷ್ಟೇ (ಜುಲೈ 13) ತಾನು ಸ್ವಾಮಿ ಜತೆಗಿರುವ ರೀತಿಯಲ್ಲಿ ತಿರುಚಿದ ವಿಡಿಯೋ ಪ್ರಸಾರ ಮಾಡಿರುವುದನ್ನು ಆಕ್ಷೇಪಿಸಿ ದೂರು ಸಲ್ಲಿಸಿದ್ದರು.
ಈ ಹಿಂದಿನ ಸರ್ಕಾರದ ವೇಳೆ ಸನ್ ಟಿವಿ ಮೇಲೆ ದೂರು ನೀಡುವ ಸೂಕ್ತ ವಾತಾವರಣ ಇರಲಿಲ್ಲ. ಹೀಗಾಗಿ ದೂರು ನೀಡಿರಲಿಲ್ಲ. ಇದೀಗ ಸೂಕ್ತ ವಾತಾವರಣ ಇರುವುದರಿಂದ ದೂರು ನೀಡಿದ್ದಾಗಿ ಸ್ವಾಮಿ ಹೇಳಿದ್ದಾರೆ.
ಸನ್ ಟೀವಿ ಸಿಒಒ ಹನ್ಸ್ರಾಜ್ ಸಕ್ಸೇನಾ, ತಮಿಳು ಪಾಕ್ಷಿಯ 'ನಕ್ಕೀರನ್' ಪತ್ರಿಕೆಯ ಸಂಪಾದಕ ಆರ್.ಆರ್. ಗೋಪಾಲ್ ಮತ್ತಿತರ ವಿರುದ್ಧ ಹಣ ಸುಲಿಗೆ (100 ಕೋಟಿ ರು.), ಜೀವ ಬೆದರಿಕೆ ಮತ್ತು ಹಲ್ಲೆ ಮಾಡಿದ ಕುರಿತು ನಿತ್ಯಾನಂದ ಧ್ಯಾನಪೀಠಂನ ವ್ಯವಸ್ಥಾಪಕ ನಿತ್ಯ ಆತ್ಮಪ್ರಭಾನಂದ ಈಗ ದೂರು ದಾಖಲಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರಿಗೆ ನಿತ್ಯಾನಂದ ಧ್ಯಾನಪೀಠ ಚಾರಿಟೆಬಲ್ ಟ್ರಸ್ಟ್ನ ಮ್ಯಾನೇಜರ್ ನಿತ್ಯಾ ಆತ್ಮಪ್ರಭಾನಂದ ದೂರು ಸಲ್ಲಿಸಿದ್ದಾರೆ. ಆಕ್ಷೇಪಾರ್ಹ ಭಂಗಿಯ ಚಿತ್ರಗಳ ಪ್ರಸಾರವನ್ನು ನಿಲ್ಲಿಸಬೇಕಾದರೆ ಹಣ ನೀಡಬೇಕೆಂದೂ ಟಿವಿಯವರು ಒತ್ತಾಯಿಸಿದರು ಎಂದ ಆತ್ಮಪ್ರಭಾನಂದ, ತನ್ನ ಮೇಲೆ ಇದೇ ವೇಳೆ ಹಲ್ಲೆ ಕೂಡ ನಡೆಸಿದರೆಂದು ದೂರಿದ್ದಾರೆ.