ಕನ್ನಡಿಗರಿಗೆ ದೇಶದ ಏಕೈಕ ಪೊಲೀಸ್ ಕಮಾಂಡೊ ಪಡೆಯ ಅಭಯ
ಬೆಂಗಳೂರಿನಲ್ಲಿ ಜನ ಸಂದಣಿ ಹೆಚ್ಚಾಗಿರುವ ಮೆಜೆಸ್ಟಿಕ್ ಬಸ್ ನಿಲ್ದಾಣ, ಸಿಟಿ-ಯಶವಂತಪುರ, ಕಂಟೋನ್ಮೆಂಟ್ ರೈಲು ನಿಲ್ದಾಣಗಳು, ಎಲ್ಲ ಶಾಪಿಂಗ್ ಮಾಲ್ ಹಾಗೂ ಮಾರ್ಕೆಟ್ ಪ್ರದೇಶಗಳಲ್ಲಿ ಬಿಗಿ ಭದ್ರತೆ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಎಲ್ಲ ಡಿಸಿಪಿಗಳಿಗೆ ಸೂಚಿಸಿದ್ದಾರೆ. ಅದರಲ್ಲಿಯೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವಂತೆ ಆದೇಶಿಸಿದ್ದಾರೆ.
ಬುಧವಾರ ರಾತ್ರಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಬೆನ್ನಲ್ಲೇ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಇದರ ಜತೆಗೆ ಭಯೋತ್ಪಾದನೆ ದಾಳಿಯಂಥ ಕೃತ್ಯಗಳು ನಡೆದಾಗ ಕಾರ್ಯಾಚರಣೆ ನಡೆಸುವಲ್ಲಿ ಎನ್ಎಸ್ಜಿ ಮಾದರಿ ತರಬೇತಿ ಪಡೆದಿರುವ ನೂತನ ಕರ್ನಾಟಕ ಕಮಾಂಡೊ ಪಡೆಯನ್ನೂ ಸನ್ನದ್ಧಲ್ಲಿರಿಸಲಾಗಿದೆ.
ಸುಮಾರು 300 ಮಂದಿ ಕಮಾಂಡೊಗಳಿರುವ ಈ ಪಡೆಗೆ ಯಾವುದೇ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೆ ಸಿದ್ಧವಾಗಿರುವಂತೆ ರಾಜ್ಯ ಪೊಲೀಸ್ ಇಲಾಖೆ ಸೂಚನೆ ಕೊಟ್ಟಿದೆ. ಮುಂಬೈನಂತೆ ಬೆಂಗಳೂರು ನಗರ ಕೂಡ ಭಯೋತ್ಪಾದಕರ ಟಾರ್ಗೆಟ್ ನಗರವಾಗಿದೆ. ಈಗಾಗಲೇ ನಗರದಲ್ಲಿ ಕೆಲವು ಬಾಂಬ್ ಸ್ಫೋಟ ಪ್ರಕರಣಗಳು ಆಗಿವೆ. ಈ ಎಲ್ಲ ಕಾರಣಕ್ಕೆ ವಿಶೇಷ ಭಯೋತ್ಪಾದಕ ನಿಗ್ರಹ ಕಮಾಂಡೊ ಪಡೆಯನ್ನು ರೆಡಿ ಮಾಡಲಾಗಿದೆ.