ಸ್ವಾಗತ ಫಲಕ ಕೂಡಾ ಇಂಗ್ಲೀಷ್ ನಲ್ಲಿ ನಾಚಿಕೆಗೇಡು
ಲೋಕೋಪಕಾರಕ್ಕೆ ಮುಂದಾಗಿರುವ ಇಲಾಖೆಯ ಈ ವರ್ತನೆಯನ್ನು ತೀವೃವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕ, ವಿದೇಶಿ ಅಕ್ಷರಗಳ ವ್ಯಾಮೋಹಕ್ಕೆ ದೇಶಿ ಆಕಳ ಸಗಣಿಯನ್ನು ಬಳಿಯುವ ಮೂಲಕ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಮುಂದಿನ ಮೂರು ದಿನಗಳಲ್ಲಿ ಕನ್ನಡ ಅಕ್ಷರವನ್ನು ಬರೆಯದಿದ್ದರೆ, ಸಂಪೂರ್ಣ ಫಲಕವನ್ನೆ ಕೆಡವಿ ಹಾಕಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಈ ನಾಮಫಲಕಕ್ಕೆ ಸಗಣಿ ಬಳಿದ ತಾಲೂಕಾ ಕ.ರ.ವೇ ಅಧ್ಯಕ್ಷ ಮಲ್ಲಾರೆಪ್ಪ ತಳ್ಳಿಹಳ್ಳಿ, ಕನ್ನಡವನ್ನು ಕಾಲಕಸವೆನ್ನುವ ಅಧಿಕಾರಶಾಹಿ ಪ್ರವೃತ್ತಿ ತಾಲೂಕಿನಲ್ಲಿ ಮುಂದುವರೆದಿದ್ದು, ಆಡಳಿತದಲ್ಲಿ ಕನ್ನಡ ಖಡ್ಡಾಯ ಎಂಬ ಸರಕಾರಿ ಸುತ್ತೋಲೆ ಕೇವಲ ಬಾಯಿ ಮಾತಿಗೆ ಮಾತ್ರ ಸೀಮಿತವಾಗಿದೆ. ಹಲವಾರು ಇಲಾಖೆಗಳಲ್ಲಿ ಇಂದಿಗೂ ವ್ಯಾಪಕವಾದ ಪ್ರಮಾಣದಲ್ಲಿ ಆಂಗ್ಲ ಭಾಷೆಯನ್ನು ಬಳಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.
ಸವಣೂರ-ಬಂಕಾಪೂರ ರಸ್ತೆಯಲ್ಲಿರುವ ಮಣ್ಣೂರ ಗ್ರಾಮದ ಬಳಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಎರಡು ಪ್ರತ್ಯೇಕ ಸ್ವಾಗತ ಫಲಕದ ತುಂಬೆಲ್ಲ ಇಂಗ್ಲೀಷ್ ಅಕ್ಷರಗಳೇ ರಾರಾಜಿಸುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ ಕಟ್ಟೆಗಳನ್ನು ಕಟ್ಟಿ ಈ ಫಲಕಗಳನ್ನು ರೂಪಿಸಲಾಗಿದೆ. ಎರಡು ಫಲಕಗಳ ಎರಡೂ ಬದಿಗಳಲ್ಲಿಯೂ ಇಂಗ್ಲೀಷ್ ಅಕ್ಷರಗಳೇ ತುಂಬಿಕೊಂಡಿದ್ದು, ನೆಪ ಮಾತ್ರಕ್ಕೂ ಕನ್ನಡವನ್ನು ಬಳಸದ ಇಲಾಖಾ ಅಧಿಕಾರಿಗಳು, ತಮ್ಮ ಇಂಗ್ಲೀಷ್ ಜಾಣ್ಮೆಯನ್ನು ತೋರಿದ್ದಾರೆ. ಆಡಳಿತದಲ್ಲಿ ಕನ್ನಡ ಎಂಬ ಸರಕಾರದ ಆದೇಶವನ್ನೂ ಉಲ್ಲಂಘಿಸಿದ್ದಾರೆ ಎಂದು ಕ.ರ.ವೇ ಆಕ್ಷೇಪಿಸಿದೆ.