ಪೋಸ್ಕೋ ವಿರುದ್ಧ ಚಳವಳಿ: ರೈತರ ಜೊತೆ ಟೆಕ್ಕಿಗಳು
ಐಟಿ ಬಿಟಿ ಉದ್ಯೋಗಿಗಳು, ವೈದ್ಯರು ಹೆಚ್ಚಾಗಿರುವ ಬೆಂಗಳೂರು ಮೂಲದ ಅವಿರತ ಟ್ರಸ್ಟ್, ಇತ್ತೀಚೆಗೆ ಗದಗ ರೈತರನ್ನು ಕೂಡಿಸಿಕೊಂಡು ಮಾಡಿದ ಪಾಠ ಪ್ರವಚನ ಈಗ ಫಲ ಕೊಟ್ಟಿದೆ. ಬೃಹತ್ ಕೈಗಾರಿಕೆಯಿಂದ ಅಭಿವೃದ್ಧಿ ಎನ್ನುವ ಸರ್ಕಾರದ ಯೋಜನೆಯ ಹಿಂದಿರುವ ಸತ್ಯಾಸತ್ಯತೆ ಬಗ್ಗೆ ರೈತರಿಗೆ ಅವಿರತದ ಟೆಕ್ಕಿಗಳು ತಿಳಿಹೇಳಿದ್ದರು.
ಗದಗ ಜಿಲ್ಲೆಯಾದ್ಯಂತ ತಂಡ ತಂಡವಾಗಿ ಭೇಟಿ ಕೊಟ್ಟು, ರೈತರಲ್ಲಿ ಜಾಗೃತಿ ಮೂಡಿಸಲು ಅವಿರತ ಟ್ರಸ್ಟ್ ಯೋಜನೆ ಹಾಕಿಕೊಂಡಿದೆ. ವಾರಾಂತ್ಯದಲ್ಲಿ 30 ಜನರ ತಂಡ ಹಳ್ಳಿಗಳಿಗೆ ಭೇಟಿ ಕೊಟ್ಟು, ಶಾಲಾ ಮಕ್ಕಳಿಂದ ಹಿಡಿದು ಗ್ರಾಮದ ಸಮಸ್ತರಿಗೆ ಶಿಕ್ಷಣ ನೀಡುತ್ತಿದೆ. ಇದರ ಜೊತೆಗೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಬೇರೆ ಸಾಗಿದೆ.
ಸುಮಾರು 12 ಲಕ್ಷ ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಕೈಗಾರಿಕಾ ಸಂಸ್ಥೆಗಳ ಕೈ ಸೇರಿದೆ. ಉಕ್ಕು ಕಾರ್ಖಾನೆ ಸ್ಥಾಪನೆಗೆ ಬೇಕಿರುವುದು 3,300 ಎಕರೆ ಭೂಮಿ ಮಾತ್ರ. ಸರ್ಕಾರ ಹೊಸದಾಗಿ ರೈತರ ಭೂಮಿ ವಶಪಡಿಸಿಕೊಳ್ಳುವುದನ್ನು ಕೈ ಬಿಟ್ಟು, ಈಗಾಗಲೇ ಕಾರ್ಖಾನೆಗಳ ವಶದಲ್ಲಿರುವ ಅಕ್ರಮ ಭೂಮಿಯನ್ನು ಪೋಸ್ಕೋಗೆ ನೀಡಲಿ ಎಂದು ಅವಿರತ ಟ್ರಸ್ಟ್ ನ ಅಧ್ಯಕ್ಷ ಕೆಟಿ ಸತೀಶ್ ಗೌಡ ಹೇಳುತ್ತಾರೆ.