ರೈಲು ದುರಂತ ಸ್ಥಳಕ್ಕೆ ಹೋಗದೆ ಸಚಿವರ ಉದ್ದಟತನ
ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಮಾನ ಸಿಗಲಿಲ್ಲ. ಅದು ಪಕ್ಷದ ಮತ್ತೋರ್ವ ನಾಯಕ ದಿನೇಶ್ ತ್ರಿವೇದಿ ಅವರ ಪಾಲಾಗಿದೆ ಎಂದು ಅಸಮಾಧಾನಗೊಂಡ ತೃಣಮೂಲ ನಾಯಕ ಮುಕುಲ್ ಪ್ರಧಾನಿ ಆದೇಶವನ್ನು ಧಿಕ್ಕರಿಸಿ, ತಮ್ಮ ಸಾಮಾಜಿಕ ಹೊಣೆಗಾರಿಕೆಗೆ ಎಳ್ಳು ನೀರು ಬಿಟ್ಟರೆಂದು ತಿಳಿದುಬಂದಿದೆ.
ಪ್ರಧಾನಿಗಳ ಸೂಚನೆ ಹೊರತಾಗಿಯೂ ತಾವು ಸ್ಥಳಕ್ಕೆ ತೆರಳುವುದಿಲ್ಲವೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಯ್, 'ಈ ಬಗ್ಗೆ ಹೇಳುವುದು ಏನೂ ಇಲ್ಲ. ಹೆಚ್ಚಿನ ಮಾಹಿತಿಗೆ ಉತ್ತರ ಪ್ರಾಂತೀಯ ರೈಲ್ವೆ ಪ್ರಧಾನ ವ್ಯವಸ್ಥಾಪಕರನ್ನು ಪ್ರಶ್ನಿಸಿ' ಎಂದು ಉದ್ದಟತನದ ಉತ್ತರ ನೀಡಿದರು.
ಉತ್ತರ ಪ್ರಾಂತೀಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎಂ.ಆರ್.ಚಂದ್ರ ಅವರು, ಸಚಿವರು ರೈಲು ಹಳಿ ತಪ್ಪಿದ ರಂಗಿಯಾ ಸ್ಥಳಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದರು. ಆದರೆ ಅಲ್ಲಿನ ಪರಿಸ್ಥಿತಿ ಸಹಜವಾಗಿದ್ದು, ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರಷ್ಟೇ. ಯಾವುದೇ ಸಾವು ಸಂಭವಿಸಿಲ್ಲ ಹಾಗಾಗಿ ಸ್ಥಳಕ್ಕೆ ಭೇಟಿ ನೀಡುವ ಅಗತ್ಯ ಇಲ್ಲ ಎಂದು ಸಲಹೆ ಮಾಡಿದ್ದಾಗಿ ತಿಳಿಸಿದರು.
ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಮಾಲ್ವ ಬಳಿ ಕಲ್ಕಾ ರೈಲು ದುರಂತದ ಸ್ಥಳಕ್ಕೆ ಏಕೆ ಭೇಟಿ ನೀಡಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಯ್, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣೆ ಹಾಗೂ ಪರಿಹಾರ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ ಎಂದು ಉತ್ತರಿಸಿದರು.