ಪದ್ಮನಾಭಸ್ವಾಮಿ ಸಂಪತ್ತು 5 ಲಕ್ಷ ಕೋಟಿ ರೂ. ಗಿಂತ ಅಧಿಕ
ದೇವಸ್ಥಾನದ ನೆಲಮಾಳಿಗೆಯಲ್ಲಿರುವ ವಸ್ತುಗಳು, ವಜ್ರಾಭರಣಗಳು, ಚಿನ್ನದ ಅಲಂಕಾರಿಕ ವಸ್ತುಗಳು, ಅಪೂರ್ವ ಹರಳುಗಳು ದೇವಸ್ಥಾನದ ಸೊತ್ತುಗಳಾಗಿವೆ. ಅವುಗಳ ಮೇಲೆ ಯಾರಿಗೂ ಹಕ್ಕಿಲ್ಲ ಎಂದು ಇನ್ನೋರ್ವ ಮಾಜಿ ಮುಖ್ಯ ಕಾರ್ಯದರ್ಶಿ ಆರ್. ರಾಮಚಂದ್ರನ್ ನಾಯರ್ ಹೇಳುತ್ತಾರೆ.
ಮಹಾರಾಜರು ದೇವಸ್ಥಾನದ ಟ್ರಸ್ಟಿ ಆಗಿದ್ದಾರೆ. (ಚಿತ್ರದಲ್ಲಿ ಟೋಪಿ ಹಾಕಿಕೊಂಡಿರುವವರು ರಾಜಾ ಮಾರ್ತಾಂಡ ವರ್ಮಾ, ಪ್ರಸ್ತುತ ಇವರೇ ಇಡೀ ಸಂಪತ್ತಿನ ವಾರಸುದಾರರು) ಹೀಗಾಗಿ ಅವರು ಸಂಪತ್ತಿನ ಅಧಿಕೃತ ಸಂರಕ್ಷಕರಾಗಿದ್ದಾರೆ. ರಾಜ ಮನೆತನ ಈ ಸಂಪತ್ತಿನಲ್ಲಿ ಒಂದು ಪೈಸೆಯನ್ನೂ ಮುಟ್ಟಿಲ್ಲ. ಈ ಸಂಪತ್ತಿನ ವಿಷಯದಲ್ಲಿ ಸರಕಾರವಾಗಲೀ ಅಥವಾ ರಾಜಕಾರಣಿಗಳಾಗಲೀ ಯಾವುದೇ ರೀತಿಯಲ್ಲಿ ಮಧ್ಯ ಪ್ರವೇಶಿಸಬಾರದು ಎಂದವರು ಒತ್ತಾಯಿಸಿದ್ದಾರೆ.
ಸಂಪತ್ತು ದೇವಸ್ಥಾನಕ್ಕೆ ಸೇರಿದ್ದಾಗಿದೆ. ಅದನ್ನು ಅಲ್ಲಿಯೇ ಸಂರಕ್ಷಿಸಿಡಬೇಕು ಎಂದು ಈ ವಿಷಯದಲ್ಲಿ ತನ್ನ ಮೌನವನ್ನು ಮುರಿದು ಕೇರಳ ಸರಕಾರ ಹೇಳಿದೆ. ಆದರೆ, ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಮಾನವೇ ಅಂತಿಮವಾಗಿರುತ್ತದೆ.
ವಿಶೇಷ ಭದ್ರತಾ ವಲಯ: ಇತಿಹಾಸ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇಗುಲದ ರಹಸ್ಯ ಉಗ್ರಾಣಗಳಲ್ಲಿ ಅಪಾರ ಪ್ರಮಾಣದ ಸ್ವರ್ಣಾಭರಣಗಳು ಮತ್ತು ಸಂಪತ್ತು ದೊರಕಿರುವ ಹಿನ್ನೆಲೆಯಲ್ಲಿ ಅದರ ರಕ್ಷಣೆಗಾಗಿ ದೇಗುಲದ ಸುತ್ತ ಸುಮಾರು 500 ಮೀಟರ್ ಪರಿಧಿಯಲ್ಲಿ ವಿಶೇಷ ಭದ್ರತಾ ವಲಯವನ್ನು ನಿರ್ಮಿಸಲು ಸರಕಾರ ಉದ್ದೇಶಿಸಿದೆ.