ಚಾಮುಂಡಿಗೆ ಯಡಿಯೂರಪ್ಪ ಆಷಾಢ ಶುಕ್ರವಾರದ ಪೂಜೆ
ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರಗಳಾದ 8, 15, 22, 29ರಂದು ಪೂಜಾ ಕಾರ್ಯಕ್ರಮಗಳಿರುವುದರಿಂದ ಅಂದು ಅಲ್ಲಿಗೆ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಬೆಟ್ಟಕ್ಕೆ ತೆರಳುವವರು ಮೈಸೂರಿನ ಹೆಲಿಪ್ಯಾಡ್ಗೆ ತೆರಳಿ ಬಳಿಕ ಅಲ್ಲಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ತೆರಳಲು ಸೂಚಿಸಲಾಗಿದೆ. (ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇಂದು ಪ್ರತಿಭಟನೆ ನಡೆಸಲು ಸಂಘಟನೆಗಳು ಸೇರಿದಂತೆ ರಾಜಕೀಯ ಪಕ್ಷಗಳು ಮುಂದಾಗಿವೆ.) ಈ ಬಸ್ಗಳು ಮುಂಜಾನೆ 2 ಗಂಟೆಯಿಂದಲೇ ಚಾಮುಂಡಿಬೆಟ್ಟಕ್ಕೆ ಸಂಚರಿಸಲಿವೆ. ಅಲ್ಲದೆ, ನಗರ ಬಸ್ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ಎಂದಿನಂತೆ ಬಸ್ಗಳು ಓಡಾಡಲಿವೆ.
ಯಡಿಯೂರಪ್ಪ ಆಗಮನ : ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ನಡೆಯಲಿರುವ ಆಷಾಢ ಶುಕ್ರವಾರದ ಮೊದಲ ಪೂಜಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದು, ಬೆಳಿಗ್ಗೆ 5.30ಕ್ಕೆ ಅವರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ.
ಬಿಗಿ ಭದ್ರತೆ : ಚಾಮುಂಡಿಬೆಟ್ಟದಲ್ಲಿ ಶುಕ್ರವಾರದಂದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಈ ಸಂಬಂಧ 300 ಪೊಲೀಸರು ಹಾಗೂ 200 ಹೋಮ್ಗಾರ್ಡ್ಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇನ್ನು 15 ಇನ್ಸ್ಪೆಕ್ಟರ್, 30 ಸಬ್ ಇನ್ಸ್ಪೆಕ್ಟರ್ಗಳು ಕರ್ತವ್ಯ ನಿರ್ವಹಿಸಲಿದ್ದಾರೆ.
ಅನ್ನಸಂತರ್ಪಣೆ : ಈಗಾಗಲೇ ಹಲವು ಸಂಘಟನೆಗಳು ಹಾಗೂ ಖಾಸಗಿ ವ್ಯಕ್ತಿಗಳು ಚಾಮುಂಡಿಬೆಟ್ಟದಲ್ಲಿ ಅನ್ನದಾನ ಮಾಡಲು ನಿರ್ಧರಿಸಿದ್ದು, ವಿವಿಧ ಭಕ್ಷ್ಯ ಭೋಜನಗಳ ತಯಾರಿಕೆ ಇಂದಿನಿಂದಲೇ ಆರಂಭವಾಗಿದೆ. ಅನ್ನದಾನ ಮಾಡಲು ತೆರಳುವ ಖಾಸಗಿ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದ್ದು, ಅಂತಹ ವಾಹನದ ಮಾಲೀಕರು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.