ಮಂಗಳೂರಲ್ಲಿ ಆಧಾರ್' ಗುರುತಿನ ಚೀಟಿ ಸೇವೆ ಜಾರಿ
ಐದು ವರ್ಷಕ್ಕಿಂತ ಮೇಲ್ಪಟ್ಟವರು ಈ ಗುರುತಿನ ಚೀಟಿ ಹೊಂದಲು ಅರ್ಹರು. ಆದರೆ ಹದಿನೈದು ವರ್ಷಕ್ಕೆ ಮೇಲ್ಪಟ್ಟವರು ಮಾತ್ರ ಬೆರಳಚ್ಚು ಮತ್ತು ಕಣ್ಣಿನ ಅಕ್ಷಿಪಟಲದ ಗುರುತು ನೀಡಬೇಕಾಗುತ್ತದೆ. ಇದನ್ನು ಪಡೆಯಲು ಗುರುತು ಮತ್ತು ಮನೆ ವಿಳಾಸ ದಾಖಲೆ, ಹುಟ್ಟಿದ ದಿನಾಂಕದ ಪ್ರಮಾಣಪತ್ರ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದವರಿಗೆ 45 ದಿನಗಳಲ್ಲಿ ಅಂಚೆ ಮೂಲಕ ಈ ಗುರುತಿನ ಚೀಟಿ ಅರ್ಜಿದಾರರಿಗೆ ತಲಪುತ್ತದೆ. ಹಂತ ಹಂತವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಚೆ ಕಚೇರಿಯಲ್ಲಿ ಈ ಗುರುತಿನ ಚೀಟಿ ವಿತರಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಇದೀಗ ಮಂಗಳೂರು ವಿಭಾಗದಲ್ಲಿ ಜಾರಿಗೆ ಬಂದಿದ್ದು, ದ್ವಿತೀಯ ಹಂತದಲ್ಲಿ ಕುಲಶೇಖರ, ಕಂಕನಾಡಿ ಮತ್ತು ಉಳ್ಳಾಲದಲ್ಲಿ, ತೃತೀಯ ಹಂತದಲ್ಲಿ ಹಂಪನಕಟ್ಟೆ ಕೊಡಿಯಾಲ್ ಬೈಲ್, ಕಂಕನಾಡಿ, ಬಿಜೈ ಕಚೇರಿಯಲ್ಲಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.
ಈ ಬಹು ಉಪಯೋಗಿ ಗುರುತಿನ ಚೀಟಿಯ ಉದ್ಘಾಟನೆಯನ್ನು ಮಂಗಳೂರಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ ಅವರು ಲಯನ್ಸ್ ಗವರ್ನರ್ ಜೆ.ಕೆ.ರಾವ್ ಅವರಿಗೆ ವಿತರಿಸುವ ಮೂಲಕ ನೆರವೇರಿಸಿದರು.