ರಾಜಾನುಕುಂಟೆ ಶಾಲೆಯಲ್ಲಿ ಯಡಿಯೂರಪ್ಪ ಏನು ಕಲಿತರು?
ಬೆಂಗಳೂರಿನ ಹೊರವಲಯದಲ್ಲಿರುವ ರಾಜಾನುಕುಂಟೆ ಸರಕಾರಿ ಶಾಲೆಗೆ ಹೋಗಿ ಮಕ್ಕಳೊಡನೆ ಮಕ್ಕಳಾಗಿ, ಮೇಷ್ಟ್ರುಗಳೊಡನೆ ಮೇಷ್ಟ್ರಾಗಿ ಕನ್ನಡ ಶಾಲೆಗಳು ಹೇಗಿರುತ್ತವೆ ಎಂಬ ಬಗ್ಗೆ ಸ್ವತಃ ಮಾಹಿತಿ ಪಡೆದು ಬಂದರು. ಮಕ್ಕಳೆಲ್ಲ ವಿವಿಧ ವೇಷ ತೊಟ್ಟು ರಂಜಿಸಿದರು, ಹಾಡಿದರು, ಕುಣಿದರು ನಲಿದಾಡಿದರು.
ಯಡಿಯೂರಪ್ಪನವರು ಕೂಡ ಮಕ್ಕಳೊಡನೆ ಬೆಂಚ್ ಮೇಲೆ ಕುಳಿತು ಪುಸ್ತಕ ಕೈಯಲ್ಲಿ ಹಿಡಿದರು, ಬಾಳೆ ಎಲೆಯ ಮೇಲೆ ಶಿಕ್ಷಣ ಸಚಿವ ವಿಶ್ವನಾಥ್ ಹೆಗಡೆ ಕಾಗೇರಿ ಮತ್ತು ಮಕ್ಕಳೊಡನೆ ಕುಳಿತು ಊಟ ಆಸ್ವಾದಿಸಿದರು, ಸೈಕಲ್ ಕೊಟ್ಟರು, ಕೆಲ ಕಿವಿಮಾತುಗಳನ್ನೂ ಹೇಳಿದರು. ಈ ಅನುಭವದಿಂದ ಯಡಿಯೂರಪ್ಪ ಕಲಿತದ್ದಾದರೂ ಏನು?
ಯಡಿಯೂರಪ್ಪನವರಿಗೆ ಕೆಲ ಸೂಚನೆಗಳು
* ಮುಂದಿನ ಬಾರಿ ಶಾಲೆಗೆ ಭೇಟಿ ನೀಡುವಾಗ ಕಾರವಾರ ಜಿಲ್ಲೆಯ ಸನಮುದಗೇರಿ ಸರಕಾರಿ ಶಾಲೆಗೆ ಭೇಟಿ ನೀಡಲಿ. ಏಕೆಂದರೆ, ಅಲ್ಲಿರುವುದು ಒಬ್ಬೇ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬೇ ಒಬ್ಬ ಶಿಕ್ಷಕ. ಆ ಶಾಲೆಯನ್ನು ಮುಚ್ಚುತ್ತಾರಾ, ಇಟ್ಟುಕೊಳ್ಳುತ್ತಾರಾ ಯಡಿಯೂರಪ್ಪ ಉತ್ತರ ನೀಡಲಿ.
* ಸರಕಾರಿ ಶಾಲೆಗಳಲ್ಲಿ ವರ್ಷದೊಳಗೆ ಶೌಚಾಲಯ ಕಟ್ಟಿಸುತ್ತೇನೆಂದು ಹೇಳಿದ್ದಾರೆ. ಅಲ್ಲಿಯವರೆಗೆ ಬಡ ಮಕ್ಕಳು ಏನು, ಎಲ್ಲಿ ಮಾಡಬೇಕು? ಇದಕ್ಕೆ ಒಂದು ಡೆಡ್ ಲೈನ್ ಹಾಕಿಕೊಳ್ಳಲಿ. ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಬಯಲೇ ಗತಿ.
* ಗಡಿಯಲ್ಲಿರುವ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಹೇಳಿದ್ದಾರೆ. ಅವು ಮುಚ್ಚುವ ಹಂತಕ್ಕೆ ಬಂದಿದ್ದಕ್ಕೆ ಕಾರಣಗಳೇನೆಂದು ತಿಳಿಯಲು ಯಡಿಯೂರಪ್ಪನವರು ಪ್ರಯತ್ನಪಡಲಿ. ಶಾಲೆ ಇಟ್ಟುಕೊಳ್ಳುವುದಷ್ಟೇ ಅಲ್ಲ, ಅಲ್ಲಿ ವಿದ್ಯಾರ್ಥಿಗಳೂ ಬರುವಂತೆ ಕಾರ್ಯಕ್ರಮ ಹಾಕಿಕೊಳ್ಳಲಿ.
* ಸರಿಯಾದ ಪಠ್ಯಪುಸ್ತಕಗಳಿಲ್ಲದೆ, ಪಾಟಿಚೀಲವಿಲ್ಲದೆ, ಟೈಬೂಟು ಇಲ್ಲದೆ ಹರಕು ಮುರುಕು ಸಮವಸ್ತ್ರಗಳಲ್ಲಿ ಬರುವ ವಿದ್ಯಾರ್ಥಿಗಳಿಗೆ ಎಲ್ಲಾ ವಸ್ತುಗಳು ದೊರಕಿಸಿಕೊಡಲು ಯಡಿಯೂರಪ್ಪನವರು ಏನು ಯೋಜನೆ ಹಾಕಿಕೊಂಡಿದ್ದಾರೆ?
* ಖಾಸಗಿ ಶಾಲೆಗಳಲ್ಲಿ ಇರುವಂತೆ ಉತ್ತಮ ಗುಣಮಟ್ಟದ ಗ್ರಂಥಾಲಯ, ಶೌಚಾಲಯ, ತರಗತಿ ಕೊಠಡಿ, ಪ್ರಯೋಗಾಲಯ, ಆಟದ ಸೌಕರ್ಯಗಳು ಸರಕಾರಿ ಶಾಲಾ ಮಕ್ಕಳಿಗೂ ದೊರೆಯುವಂತಾಗಲಿ. [ಗ್ಯಾಲರಿ : ಸರಕಾರಿ ಶಾಲಾ ಮಕ್ಕಳೊಂದಿಗೆ ಯಡಿಯೂರಪ್ಪ]