ಕೃಷ್ಣದೇವರಾಯ ನಾಣ್ಯ ತಯಾರಿಕೆಗೆ ಕೇಂದ್ರ ಅಸಡ್ಡೆ
ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ 'ನಮ್ಮಲ್ಲಿ ನಾಣ್ಯ ತಯಾರಕ ಸಿಬ್ಬಂದಿಯ ಕೊರತೆ ಇದೆ. ನಾಣ್ಯಗಳ ಕೊರತೆಯೂ ಇದೆ. ಟಂಕ ಶಾಲೆಯ ಸಿಬ್ಬಂದಿ ಆರ್ಬಿಐನ ಟಾರ್ಗೆಟ್ ತಲುಪುವಲ್ಲಿ ಬ್ಯುಸಿಯಾಗಿದ್ದಾರೆ. ನಿರೀಕ್ಷಿಸಿದ ಸಮಯದಲ್ಲಿ ಸಾಧ್ಯವಿಲ್ಲ" ಎಂದು ಪತ್ರದಲ್ಲಿ ತಿಳಿಸುವ ಮೂಲಕ ಈ ಪ್ರಶ್ನೆ ಮೂಡಿದೆ.
ಕರ್ನಾಟಕ ರಾಜ್ಯ ಸರ್ಕಾರ ವಿಜಯನಗರ ಸಾಮ್ರಾಜ್ಯದ ಅಧಿಪತಿ ಶ್ರೀಕೃಷ್ಣದೇವರಾಯ ಅವರ 500ನೇ ಪಟ್ಟಾಭಿಷೇಕ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಹಂಪೆ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಅಲ್ಲದೇ, 100 ಕೋಟಿ ರುಪಾಯಿ ವೆಚ್ಚದಲ್ಲಿ ಥೀಮ್ಪಾರ್ಕ್ ನಿರ್ಮಿಸಲಿದೆ.
ಕೇಂದ್ರ ಸರ್ಕಾರ ಕೂಡ ರಾಜ್ಯ ಸರ್ಕಾರದ ಆಶಯಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿ, ಶ್ರೀಕೃಷ್ಣದೇವರಾಯ ಸ್ಮಾರಕ ಅಂಚೆ ಚೀಟಿಯನ್ನು ಸಮಾರಂಭದ ವೇದಿಕೆಯಲ್ಲೇ ಪ್ರಕಟಿಸಿದೆ. ಇದಕ್ಕೆ ಪೂರಕವಾಗಿ 'ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕದ 500ನೇ ವರ್ಷಾಚರಣೆಯ ಅಂಗವಾಗಿ ಅಪರೂಪದ ಸ್ಮಾರಕ ನಾಣ್ಯವನ್ನು" ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಹಣಕಾಸು ಸಚಿವಾಲಕ್ಕೆ ಮನವಿ ಸಲ್ಲಿಸಿತ್ತು.
ಮುಖ್ಯಮಂತ್ರಿ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ ಇಬ್ಬರೂ ಕೂಡ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಈ ಕುರಿತು ಪತ್ರ ಬರೆದು 'ಅಪರೂಪದ ಸ್ಮಾರಕ" ನಾಣ್ಯ ಬಿಡುಗಡೆಗೆ ಕೋರಿದ್ದರು. ಆದರೆ, ಕೇಂದ್ರ ಸರ್ಕಾರ ನಕಾರಾತ್ಮಕವಾಗಿ ಸ್ಪಂದಿಸಿದೆ.
ಜನಾರ್ದನರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಣಬ್ ಮುಖರ್ಜಿ ಅವರು ಅಪರೂಪದ ಸ್ಮಾರಕ ನಾಣ್ಯ ಬಿಡುಗಡೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ದೇಶದ - ವಿಶ್ವದ ಇತಿಹಾಸದ ಭಾಗವಾಗಿರುವ ಹಂಪೆಯ ವಿಜಯನಗರ ಸಾಮ್ರಾಜ್ಯಕ್ಕೆ ಗೌರವ ಸಲ್ಲಿಸಬೇಕಿದೆ. ವಿಜಯನಗರ ಸಾಮ್ರಾಜ್ಯ ದೇಶದ ಕೀರ್ತಿ ಶಿಖಿರ. ಕೇಂದ್ರ ಸಚಿವ ಪಿ. ಚಿದಂಬರಂ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇಶದ ಯುವ ಪೀಳಿಗೆಗೆ ವಿಜಯನಗರ ಸಾಮ್ರಾಜ್ಯದ ಮಹತ್ವ, ಸಾಧನೆ ಹಾಗೂ ಇತಿಹಾಸ ತಿಳಿಸಿ ಹೇಳುವ ನಿಟ್ಟಿನಲ್ಲಿ ಶ್ರೀಕೃಷ್ಣದೇವರಾಯರ ನಾಣ್ಯ ಬಿಡುಗಡೆ ಆಗಬೇಕಿತ್ತು ಎಂದು ಹೇಳಿದರು.
ಈ ವಿಚಾರದಲ್ಲಿ ಅಧಿಕಾರಿಗಳು ದಾರಿತಪ್ಪಿಸಿರುವ ಸಾಧ್ಯತೆಗಳಿವೆ. ಕಾರಣ ಕೇಂದ್ರ ಸರ್ಕಾರಕ್ಕೆ ಮತ್ತು ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಮತ್ತೊಮ್ಮೆ ಪತ್ರ ಬರೆದು, ನಾಣ್ಯ ಬಿಡುಗಡೆಗೆ ಕೋರುವೆ ಎಂದು ಹೇಳಿದರು.