ಗೌಡ್ರ ಕುಟುಂಬ ಆಸ್ತಿ ಸದ್ಯದಲ್ಲೇ ಸರಕಾರದ ವಶಕ್ಕೆ: 'ಬಿಜೆಪಿ'
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ರೇವಣ್ಣ ಸೇರಿದಂತೆ ಎಲ್ಲರ ವಿರುದ್ದ ಅಕ್ರಮ ವ್ಯವಹಾರಗಳ ಬಗ್ಗೆ ಉನ್ನತಾಧಿಕಾರಿಗಳ ಮಟ್ಟದಲ್ಲಿ ತನಿಖೆ ಪ್ರಕ್ರಿಯೆ ನಡೆಯುತ್ತಿದೆ. ತನಿಖೆ ನಡೆದಿಲ್ಲ ಎನ್ನುವ ಕುಮಾರಸ್ವಾಮಿ ಹೇಳಿಕೆಯಲ್ಲಿ ಹುರುಳಿಲ್ಲ. ಬಿಜೆಪಿ ಬಿಡುಗಡೆ ಮಾಡಿರುವ ಎಲ್ಲಾ ಹಗರಣಗಳ ಬಗ್ಗೆ ವಿವಿಧ ಹಂತದ ತನಿಖೆ ಪ್ರಗತಿಯಲ್ಲಿದೆ ಎಂದು ಪುಟ್ಟಸ್ವಾಮಿ ಹೇಳಿಕೆ ನೀಡಿದ್ದಾರೆ.
ಸರಕಾರೀ ಮಟ್ಟದಲ್ಲಿ ನಡೆಯುತ್ತಿರುವ ತನಿಖೆಗಳ ಬಗ್ಗೆ ದಾಖಲೆ ಸಮೇತ ಮಾತನಾಡಿದ ಪುಟ್ಟಸ್ವಾಮಿ, ರಾಮನಗರ ಕ್ಷೇತ್ರದ ಚುನಾವಣಾ ಸಂದರ್ಭದಲ್ಲಿ ತಮ್ಮ ಆಸ್ತಿಪಾಸ್ತಿಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣ ಪತ್ರ ನೀಡಿದ ಕುಮಾರಸ್ವಾಮಿ ವಿರುದ್ದ ಈಗಾಗಲೇ ರಾಮನಗರ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ವಿಚಾರಣೆ ಇದೆ ತಿಂಗಳ 17ರಂದು ಅಂತಿಮಗೊಳ್ಳಲಿದೆ. ಸುಳ್ಳು ಪ್ರಮಾಣಪತ್ರ ನೀಡಿರುವುದು ರುಜುವಾತಾದರೆ ಅವರು ಸಂಸದ ಸ್ಥಾನದಿಂದ ಅನರ್ಹ ಗೊಳ್ಳಲಿದ್ದಾರೆಂದು ಎನ್ನುವ ಸತ್ಯ ಕುಮಾರಸ್ವಾಮಿಗೆ ಅವರಿಗೆ ತಿಳಿದಿರಲಿ ಎಂದು ಎಚ್ಚರಿಸಿದರು.