ನನಗೆ ಆಧಾರ್ ಗುರುತಿನ ಚೀಟಿ ಬೇಕು, ಎಲ್ಲಿ ಸಿಕ್ಕತ್ತೆ?
ಜೂ 24ರಿಂದ ನಗರದ ಪ್ರಧಾನ ಅಂಚೆ ಕಚೇರಿ (ಜಿಪಿಒ) ಸೇರಿದಂತೆ 9 ಅಂಚೆ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನಗರದ 35 ಅಂಚೆ ಕಚೇರಿಗಳೂ ಸೇರಿದಂತೆ ರಾಜ್ಯದ ಆಯ್ದ 236 ಅಂಚೆ ಕಚೇರಿಗಳಲ್ಲಿ 'ಆಧಾರ್" ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಎಲ್ಲಿ ನೋಂದಣಿ?: ಬಸವನಗುಡಿ ಮುಖ್ಯ ಅಂಚೆ ಕಚೇರಿ, ಆರ್.ಟಿ.ನಗರ, ಎಚ್ಎಎಲ್ 2ನೇ ಹಂತ, ರಾಜಾಜಿನಗರ , ವಿಜಯನಗರ, ವಿಲ್ಸನ್ ಗಾರ್ಡನ್, ಜಯನಗರ ಮುಖ್ಯ ಅಂಚೆ ಕಚೇರಿ, ಮಹಾಲಕ್ಷ್ಮಿಪುರಂ ಮುಖ್ಯ ಅಂಚೆ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆ.
ಇದರ ಜತೆಗೆ ನಂದಿನಿ ಲೇಔಟ್, ಬಸವೇಶ್ವರ ನಗರ ಹಾಗೂ ಮಲ್ಲೇಶ್ವರ ಕಚೇರಿಗಳಲ್ಲಿ ಈ ವಾರದಿಂದ ಈ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇದಲ್ಲದೆ, ರಾಮನಗರ, ಚನ್ನಪಟ್ಟಣ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಮುಖ್ಯ ಅಂಚೆ ಕಚೇರಿಗಳಲ್ಲಿ ಅಂಚೆ ಇಲಾಖೆ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ನಿರಂತರ ಪ್ರಕ್ರಿಯೆ: ಅಂಚೆ ಕಚೇರಿಗಳಲ್ಲಿ ಪ್ರತ್ಯೇಕ ಕೌಂಟರ್ಗಳಲ್ಲಿ ಈ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈಗಾಗಲೇ ಒಂದು ಲಕ್ಷ ಉಚಿತ ಅರ್ಜಿಗಳನ್ನು ವಿತರಿಸಲಾಗಿದೆ. ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಿಲ್ಲ. ಇದೊಂದು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ.
ಟೋಕನ್ ವ್ಯವಸ್ಥೆ: ಅಂಚೆ ಕಚೇರಿಗಳ ಬಳಿ ಸರದಿ ಸಾಲನ್ನು ತಪ್ಪಿಸಲು ಮೊದಲೇ ಟೋಕನ್ ನೀಡಲಾಗುತ್ತಿದೆ. ಹೀಗಾಗಿ, ಸಮಯ ಸಿಕ್ಕಾಗ ನಾಗರಿಕರು ಕೌಂಟರ್ಗಳಿಗೆ ಭೇಟಿ ಕೊಡಬಹುದು. ಗಂಟೆಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ.
ನೋಂದಣಿ ವಿಧಾನ: ಅಂಚೆ ಕಚೇರಿಯ 'ಆಧಾರ್" ಕೌಂಟರ್ಗಳಲ್ಲಿ ನಾಗರಿಕರು ಅರ್ಜಿ ನಮೂನೆ ಸ್ವೀಕರಿಸಬಹುದು. ಭರ್ತಿ ಮಾಡುವ ಅರ್ಜಿ ಜತೆಗೆ ಮೂಲ ದಾಖಲೆಗಳ ದೃಢೀಕರಣಕ್ಕಾಗಿ ಗುರುತಿನ ಚೀಟಿ, ವಿಳಾಸ ಹಾಗೂ ಜನ್ಮ ದಿನಾಂಕದ ದಾಖಲೆಗಳ ಮೂಲ ಪ್ರತಿಗಳನ್ನು ನೀಡಬೇಕು.
ದಾಖಲೆ ಪರಿಶೀಲಿಸಿದ ನಂತರ ಬಯೋಮೆಟ್ರಿಕ್ ವ್ಯವಸ್ಥೆಯಡಿ 10 ಬೆರಳುಗಳು, ಅಕ್ಷಿಪಟಲ ಹಾಗೂ ಭಾವಚಿತ್ರ ತೆಗೆಯಲಾಗುತ್ತಿದೆ. ಕಂಪ್ಯೂಟರ್ಗೆ ಮಾಹಿತಿ ಅಳವಡಿಸಿದ ನಂತರ ಮೂಲ ದಾಖಲೆ ಪತ್ರಗಳನ್ನು ತಕ್ಷಣವೆ ವಾಪಸು ನೀಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆ ಮುಗಿದ ನಂತರ ಸಂಬಂಧಪಟ್ಟವರಿಗೆ ಸ್ವೀಕೃತಿ ಪತ್ರವನ್ನೂ ನೀಡಲಾಗುತ್ತಿದೆ. ಪ್ರಾಧಿಕಾರ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ನೀಡಿದ ನಂತರ ಸ್ಪೀಡ್ ಪೋಸ್ಟ್ ಮೂಲಕ ನೇರವಾಗಿ ಮನೆ ವಿಳಾಸಕ್ಕೆ ಕಳುಹಿಸಲಾಗುತ್ತಿದೆ.