ಉದ್ದೀಪನ ಮದ್ದಿಗೆ 'ಚಿನ್ನದ ಚಿಗರೆ' ಅಶ್ವಿನಿ ಅಕ್ಕುಂಜೆ ಬಲಿ
ಏನಪಾ ಅಂದರೆ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಭಾರತ ಅಥ್ಲೀಟ್ಗಳಾದ ಅಶ್ವಿನಿ ಅಕ್ಕುಂಜೆ ಹಾಗೂ ಪ್ರಿಯಾಂಕಾ ಪನ್ವಾರ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಇದರಿಂದಾಗಿ ಜಪಾನ್ನ ಕೋಬ್ನಲ್ಲಿ ಜುಲೈ 7ರಿಂದ 10ರವರೆಗೆ ನಡೆಯಲಿರುವ ಏಷ್ಯಾ ಅಥ್ಲೆಟಿಕ್ ಚಾಂಪಿಯನ್ಷಿಪ್ಗೆ ತೆರಳದಂತೆ ಅವರನ್ನು ತಡೆಹಿಡಿಯಲಾಗಿದೆ.
ಕೋಚ್ ಕಾರಣೀಭೂತ: 'ತಮ್ಮಿಂದ ತಪ್ಪನ್ನು ಮುಚ್ಚಿ ಹಾಕಲು ಆಹಾರ ಎಂದು ಕೆಲವರು ಸಬೂಬು ಹೇಳುತ್ತಿದ್ದಾರೆ. ಅಥ್ಲೀಟ್ಗಳು ಸಿಕ್ಕಿಬೀಳಲು ಆಹಾರ ಖಂಡಿತ ಕಾರಣವಲ್ಲ. ವಿದೇಶಿ ಕೋಚ್ ಯೂರಿ ಒಗೊರೊನಿಕ್ ಕಾರಣ. ಇದರಲ್ಲಿ ಭಾರತದ ಕೆಲ ಕೋಚ್ಗಳ ಕೈವಾಡವೂ ಇದೆ. ಉತ್ತಮ ಫಲಿತಾಂಶ ತರಲು ಅಡ್ಡ ದಾರಿ ಹಿಡಿಯುತ್ತಿದ್ದಾರೆ ಎಂದು ಖ್ಯಾತ ಕೋಚ್ ವಿ.ಆರ್.ಬೀಡು ಆರೋಪಿಸಿದ್ದಾರೆ. ಈಗ ಸಿಕ್ಕಿಬಿದ್ದಿರುವ ಹೆಚ್ಚಿನ ಮಹಿಳಾ ಅಥ್ಲೀಟ್ಗಳೆಲ್ಲಾ ಉಕ್ರೇನ್ನ ಯೂರಿ ಅವರ ಮಾರ್ಗದರ್ಶನದಲ್ಲಿ ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎನ್ನುವುದು ವಿಶೇಷ.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಜೂನ್ 27ರಂದು ಪಟಿಯಾಲದಲ್ಲಿ ಇವರನ್ನು ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ಅನಾಬಾಲಿಕ್ ಸ್ಟಿರಾಯ್ಡ ತೆಗೆದುಕೊಂಡಿರುವುದು 'ಎ' ಸ್ಯಾಂಪಲ್ ಪರೀಕ್ಷೆಯಿಂದ ಸಾಬೀತಾಗಿದೆ. 'ಎ' ಸ್ಯಾಂಪಲ್ ಪರೀಕ್ಷೆಯಲ್ಲಿ 'ಮೆಟಾಬಾಲೈಟ್ಸ್ ಆಫ್ ಮೆತಂಡಿನಾನ್' ಎಂಬ ಅಂಶ ಇರುವುದು ಪತ್ತೆಯಾಗಿದೆ. ಆಕಸ್ಮಾತ್ 'ಬಿ' ಸ್ಯಾಂಪಲ್ ಪರೀಕ್ಷೆಯಲ್ಲೂ ಮದ್ದು ಸೇವಿಸಿರುವುದು ಸಾಬೀತಾದರೆ ಗರಿಷ್ಠ ಎರಡು ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.
ನವದೆಹಲಿ ಕಾಮನ್ವೆಲ್ತ್ ಹಾಗೂ ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ 400 ಮೀ. ಓಟ ಮತ್ತು 4x400 ಮೀ. ರಿಲೇಯಲ್ಲಿ ಚಿನ್ನದ ಪದಕ ಜಯಿಸಿದ್ದ ಅಶ್ವಿನಿ ಏಷ್ಯಾ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ಸೋಮವಾರ ರಾತ್ರಿ 11.30ಕ್ಕೆ ಜಪಾನ್ಗೆ ತೆರಳಬೇಕಿತ್ತು. ಅಶ್ವಿನಿ ಹಾಗೂ ಪ್ರಿಯಾಂಕಾ 4x400 ಮೀ. ರಿಲೇಯಲ್ಲಿ ಸ್ಪರ್ಧಿಸಲು ಆಯ್ಕೆ ಆಗಿದ್ದರು. ಅಷ್ಟರಲ್ಲಿ ಈ ಆಘಾತಕಾರಿ ಅಂಶ ಹೊರಬಿದ್ದಿದೆ.