ವಿಸ್ಮಯಗಳ ಆಗರ : ಕವಡಿಕೆರೆ ಪುರಾಣ ಕೇಳೋಣ ಬನ್ನಿ
60 ಎಕರೆ ವಿಸ್ತೀರ್ಣದ ಈ ಕೆರೆಯ ಉಗಮದ ಬಗ್ಗೆ ಹತ್ತುಹಲವು ದಂತಕಥೆಗಳಿವೆ.ಪಾಂಡವರು ವನವಾಸಕ್ಕೆಂದು ಕಾಡಿಗೆ ಬಂದಿದ್ದ ಸಮಯದಲ್ಲಿ ಭೀಮನು ಹಣ್ಣುಹಂಪಲಗಳನ್ನರಸುತ್ತ ಕಾಡಿನಲ್ಲಿ ಅಲೆಯುತ್ತಿದ್ದ.ಹಾಗೆ ಅಲೆಯುತ್ತಿರುವಾಗ ಹತ್ತಿರದಲ್ಲೆಲ್ಲೋ ಇಂಪಾದ ಸಂಗೀತ ಕೇಳಿಬರತೊಡಗಿತು.
ಆ ಸಂಗೀತದ ಮೂಲವನ್ನರಸುತ್ತ ಹೊರಟಾಗ ಸಮೀಪದಲ್ಲಿಯೇ ಆತನಿಗೆ ದುರ್ಗಾದೇವಿಯ ಮೂರ್ತಿಯೊದು ಕಣ್ಣಿಗೆ ಬಿತ್ತು.ಹತ್ತಿರ ಹೋದಾಗ ಕಾಶಿಯಿಂದ ಕವಡೆಯಲ್ಲಿ ಗಂಗೆಯನ್ನು ತಂದು ಈ ಸ್ಥಳದಲ್ಲಿ ಸ್ಥಾಪನೆ ಮಾಡುವಂತೆ ದೇವಿ ಆಜ್ಞಾಪಿಸಿದಳು.ಹಾಗೆ ದೇವಿಯ ಆಜ್ಞೆಯಂತೆ ಭೀಮ ಕಾಶಿಯಿಂದ ಕವಡೆಯಲ್ಲಿ ಗಂಗಾ ಜಲವನ್ನು ತಂದು ಇಲ್ಲಿ ಕೆರೆಯನ್ನು ನಿರ್ಮಿಸಿ ಗಂಗೆಯನ್ನು ಸ್ಥಾಪಿಸಿ, ದುರ್ಗಾದೇವಿಯ ದೇವಾಲಯವನ್ನೂ ಸ್ಥಾಪಿಸಿದ ಎಂಬ ಕಥೆಯಿದೆ.
ಇದೇ ಕೆರೆಯ ಬಗ್ಗೆ ಇರುವ ಇನ್ನೊಂದು ಕಥೆಯೆಂದರೆ,ಪಾಂಡವರು ವನವಾಸಕ್ಕೆ ಬಂದಿದ್ದಾಗ ಬಾಯಾರಿದ ಭೀಮ ಕುಡಿಯಲು ನೀರು ಸಿಗದೆ ಒದ್ದಾಡಿ ನಂತರ ಈ ಕೆರೆಯಿರುವ ಜಾಗದಲ್ಲಿ ತನ್ನ ಕಾಲಿನ ಹೆಬ್ಬೆರಳಿನಿಂದ ಭೂಮಿಯನ್ನು ತಿವಿದು ಕೆರೆಯನ್ನು ಸೃಷ್ಟಿಸಿ ನೀರು ಕುಡಿದ ಎಂದೂ ಹೇಳಲಾಗುತ್ತದೆ.
ಪ್ರತೀ ವರ್ಷ ಗಂಗಾಷ್ಟಮಿಯ ದಿನ ಇಲ್ಲಿ ವಿಶೇಷ ಪೂಜೆಗಳು ಹಾಗೂ ಜಾತ್ರೆ ನಡೆಯುತ್ತದೆ. ಒಟ್ಟಿನಲ್ಲಿ ಈ ಕೆರೆ ಭೀಮನಿಂದ ನಿರ್ಮಿತವಾದದ್ದು ನಿಜವೋ ಸುಳ್ಳೋ...ಆದರೆ, ಮನುಷ್ಯ ಮಾತ್ರರಿಂದ ನಿರ್ಮಿಸಲು ಕಷ್ಟಸಾಧ್ಯ ಎಂಬುದಂತೂ ಸತ್ಯ!