ತೈಲಬೆಲೆ ವಿರೋಧಿಸಿ ಅರಕಲಗೂಡಿನಲ್ಲಿ ಚಕ್ಕಡಿ ಮೆರವಣಿಗೆ
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರಕುಮಾರ್ ಹಾಗೂ ತಾಲೂಕು ಘಟಕದ ಅಧ್ಯಕ್ಷ ರಾಜೇಗೌಡ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಚಕ್ಕಡಿಗಳನ್ನು ಮೆರವಣಿಗೆಯಲ್ಲಿ ತರುವ ಮೂಲಕ ಗಮನ ಸೆಳೆದ ಪ್ರತಿಭಟನಾಕಾರರು, ಪೇಟೆ ಅನಕೃ ವೃತ್ತದ ಮೂಲಕ ಸಾಗಿ ಕೋಟೆ ಗಣಪತಿ ಕೊತ್ತಲು ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರವೀಂದ್ರಕುಮಾರ್, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಸೀಮೆಎಣ್ಣೆ ಬೆಲೆಯನ್ನು ಸರ್ಕಾರ ಮನಸೋಇಚ್ಚೆ ಏರಿಸಿದೆ. ಇದರಿಂದಾಗಿ ಜನಸಾಮಾನ್ಯರ ಬದುಕು ತುಟ್ಟಿಯಾಗಿದೆ ಬದುಕು ದುಸ್ತರವಾಗಿದೆ. ತಕ್ಷಣ ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಹಾಸನ-ಅರಕಲಗೂಡು-ರಾಮನಾಥಪುರ-ಕೊಣನೂರು ಮತ್ತು ಅರಕಲಗೂಡು-ಶನಿವಾರಸಂತೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ಸರ್ಕಾರ ರಸ್ತೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ ಬಂದ ಅನುದಾನವನ್ನು ಬೇರೆಡೆಗೆ ವರ್ಗಾಯಿಸಿಕೊಂಡು ಜಿಲ್ಲೆಯ ಜನರನ್ನು ವಂಚಿಸಿದೆ ಎಂದು ಆರೋಪಿಸಿದರು.
ಅರಕಲಗೂಡು-ಹಾಸನ ಮಾರ್ಗದ ಬಸ್ ಗಳು ಕಡ್ಡಾಯವಾಗಿ ಸಂತೆಪೇಟೆ ಮಾರ್ಗವಾಗಿ ಸಂಚರಿಸಬೇಕು, ಈಗ ಬೈಪಾಸ್ ಮಾರ್ಗದಲ್ಲಿ ಸಂಚರಿಸುತ್ತಿರುವುದರಿಂದ ರೈತರಿಗೆ ಮತ್ತು ಕೂಲಿಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ, ಕೆಎಸ್ ಆರ್ ಟಿ ಸಿ ಡಿಸಿ ಬಸವರಾಜು ಈ ವಿಚಾರದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಾ ಪೋಲಿಸರು ಅನುಮತಿಸಬೇಕು ಎಂದು ಹೇಳುತ್ತಿದ್ದಾರೆ. ಇಂತಹ ವರ್ತನೆಯನ್ನು ತಾವು ಸಹಿಸುವುದಿಲ್ಲ ಇನ್ನು ಒಂದು ವಾರದೊಳಗೆ ಸಂತೆಪೇಟೆ ಮಾರ್ಗವಾಗಿ ಬಸ್ ಗಳು ಈ ಹಿಂದಿನಂತೆ ಸಂಚರಿಸದಿದ್ದರೆ ಹಾಸನ ನಗರದೊಳಗೆ ಸಂಚರಿಸುವ ಎಲ್ಲಾ ಬಸ್ ಗಳನ್ನು ತಡೆಯಲಾಗುವುದು ಎಂದು ಎಚ್ಚರಿಸಿದರು.
ತಿಮ್ಮಕ್ಕನಿಂದ ಉಚಿತ ಗಿಡ ವಿತರಣೆ : ಪೊಟ್ಯಾಟೋ ಕ್ಲಬ್ ಆಶ್ರಯದಲ್ಲಿ ಉಚಿತ ಗಿಡಗಳನ್ನು ಸಾಲುಮರದ ತಿಮ್ಮಕ್ಕ ರೈತರಿಗೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷ ಯೋಗಾರಮೇಶ್ ತಿಳಿಸಿದ್ದಾರೆ. ಜು.3ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಲು ಮರದ ತಿಮ್ಮಕ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಗಿಡ ವಿತರಣೆ ಮಾಡುವರು.