ಮೊಯ್ಲಿ ಕಿತ್ತಾಕ್ಕಿದ್ರೆ ನಂಗೆ ಚಾನ್ಸ್ ಕೊಡಿ ಮೇಡಂ: ಹರಿಪ್ರಸಾದ್
ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರ ಸ್ಥಾನಕ್ಕೆ ಸಂಚಕಾರ ಉಂಟಾಗಿದ್ದು, ಬಿ.ಕೆ. ಹರಿ ಪ್ರಸಾದ್ ಹಾಗೂ ರೆಹ್ಮನ್ಖಾನ್ ಅವರು ಮೊಯ್ಲಿ ಸೀಟು ಬೇಕು ಎಂದು ಭಾರಿ ಲಾಬಿ ನಡೆಸುತ್ತಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುವ ಈ ಇಬ್ಬರು ರಾಜ್ಯಸಭಾ ಸದಸ್ಯರಾಗಿದ್ದು, ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯುವ ಉದ್ಧೇಶದಿಂದ ಮೊಯ್ಲಿ ವಿರುದ್ಧ ಪಿತೂರಿ ನಡೆಯತೊಡಗಿದೆ.
ಹೀಗಿದೆ ಲೆಕ್ಕಾಚಾರ: ರಾಜ್ಯವನ್ನು ಪ್ರತಿನಿಧಿಸುವ ಸಚಿವರಲ್ಲಿ ಒಬ್ಬರನ್ನು ಕೈಬಿಡುವ ಸಾಧ್ಯತೆಯಿದೆ. ಆಗ ಸಚಿವ ಸ್ಥಾನ ಸಲೀಸಾಗಿ ಸಿಗಲಿದೆ ಎಂಬ ನಂಬಿಕೆ ಹರಿಪ್ರಸಾದ್ ಅವರಿಗಿದೆ. ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ, ಪ್ರಧಾನಿ ಮತ್ತು ಸೋನಿಯಾಗಾಂಧಿ ಯವರಿಗೆ ಭಾರೀ ಹತ್ತಿರದಲ್ಲಿದ್ದಾರೆ. ಕೃಷ್ಣ ಅವರ ಕಾರ್ಯವೈಖರಿ ಬಗ್ಗೆ ಪಕ್ಷದಲ್ಲಿ ಅಪಸ್ವರ ಇದ್ದರೂ ಕೃಷ್ಣ ಅವರನ್ನು ಕೆಳಗಿಳಿಸಲು ಸೋನಿಯಾಜಿಗೆ ಮನಸ್ಸಿಲ್ಲ. ಇಳಿಸಿದರೂ ದೊಡ್ಡ ಹುದ್ದೆ ನೀಡುವುದಂತೂ ಗ್ಯಾರಂಟಿ.
ಇನ್ನು ಮಲ್ಲಿಕಾರ್ಜುನ ಖರ್ಗೆ ಮತ್ತು ಮುನಿಯಪ್ಪ ಜಾತಿ ಆಧಾರದ ಮೇಲೆ ಸಂಪುಟದಲ್ಲಿ ಖಾಯಂ ಅತಿಥಿಗಳಾಗಿರುತ್ತಾರೆ. ಜಾತಿ ವಿಷಯದಲ್ಲಿ ಮೊಯ್ಲಿಯವರಿಗೆ ಬೆಂಬಲ ದೊರೆತರೂ ವರಿಷ್ಠರಿಗೆ ಯಾಕೋ ಮೊಯ್ಲಿ ಮೇಲೆ ಅಸಮಾಧಾನವಿದೆ. ಮೂಲಗಳ ಪ್ರಕಾರ ಚಿವ ಸ್ಥಾನಕ್ಕಾಗಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಮೂಲಕ ಹರಿಪ್ರಸಾದ್ ಲಾಬಿ ನಡೆಸುತ್ತಿದ್ದಾರೆ.