ಹುಸೇನ್ ಸಾಬಿಗೂ ಎಮ್ಮಿಕೇರಿ ಪಾಲಿಕೆಗೂ ಏನ್ ಸಂಬಂಧ?
ವಾಡಿಕೆಯಂತೆ ನಮ್ಮನ್ನು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಸಂತಾಪ ಸೂಚನೆ ವಿಧಿ ವಿಧಾನ ಜನಪ್ರತಿನಿಧಿಗಳ ಸಭೆಯಲ್ಲಿ ಕಾಮನ್. ಆದರೆ, ಬಿಜೆಪಿ ಪಕ್ಷದ ಪಾಲಿಕೆ ಸದಸ್ಯ ಶಿವಾನಂದ ಮಟ್ಟನವರ್ ಅವರು ಎಂಎಫ್ ಹುಸೇನ್ ಒಬ್ಬ ದೇಶದ್ರೋಹಿ ಅವನಿಗೆ ಯಾವುದೇ ಸಂತಾಪ ಸೂಚಿಸಬೇಕಾಗಿಲ್ಲ ಎಂದು ಮಾಸಿಕ ಸಭೆಯಲ್ಲಿ ಹೇಳಿದ್ದು ಗದ್ದಲಕ್ಕೆ ಕಾರಣವಾಯಿತು.
ಶಿವಾನಂದ್ ಅವರ ಹೇಳಿಕೆ ಖಂಡಿಸಿದ ಕಾಂಗ್ರೆಸ್ ನ ಗನೇಶ್ ತಗರ್ ಗುಂಟಿ, ಇದು ಆರೆಸ್ಸೆಸ್ ಸಭೆಯಲ್ಲ, ಹುಸೇನ್ ಗೆ ಸರಿಯಾದ ಮರ್ಯಾದೆ ಕೊಡುವುದನ್ನು ಕಲಿತುಕೊಳ್ಳಿ ಎಂದು ಹೇಳಿದರು. ಇದೆ ಸಮಯಕ್ಕೆ ಕಾಯುತ್ತಿದ್ದ ಜನಪ್ರಿತಿನಿಧಿಗಳು ಕೈಗೆ ಸಿಕ್ಕಿದ ಬಾಟಲಿ, ಪೇಪರ್ ಗಳನ್ನು ಗಾಳಿಗೆ ತೂರುತ್ತಾ ಗಲಭೆ ಎಬ್ಬಿಸಿದರು. ಹುಸೇನ್ ಹೆಸರಿನಲ್ಲಿ ಶುರುವಾದ ಕದನ ವೈಯಕ್ತಿಕ ಬೈಗುಳಕ್ಕೆ ತಿರುಗಿ, ಪರಸ್ಪರ ಕೆಸರೆರಚಾಟಕ್ಕೆ ತಿರುಗಿತು.
ಈ ಸಮಯದಲ್ಲಿ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಪಟ್ಟು ವಿಫಲರಾದ ಮೇಯರ್ ಪೂರ್ಣ ಪಾಟೀಲ್, ಸಭೆಯನ್ನು ಮುಂದೂಡಿದರು. ಶಿವಾನಂದ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಪಕ್ಷ ನಾಯಕ್ ದೀಪಕ್ ಚಿಂಚೋರೆ, ಜೆಡಿಎಸ್ ನ ಆಲ್ತಾಫ್ ಕಿತ್ತೂರು ಆಗ್ರಹಿಸಿದ್ದಾರೆ. ಸಭೆಯಿಂದ ಹೊರ ಬೀಳುತ್ತಿದ್ದಂತೆ ದೂರದಲ್ಲಿ ಒಂದು ಧ್ವನಿ ಲೇ ಯಾರಲೇ ಅದು ಹುಸೇನ್ ಎಂದು ಕೇಳಿದ್ದು, ಮೇಯರ್ ಕಿವಿಗೆ ಬೀಳಲಿಲ್ಲವಂತೆ.