ಜ್ಯೋತಿಡೇ ಸುಪಾರಿ ಹಂತಕರು ಬೆಂಗಳೂರಿಗೂ ಬಂದಿದ್ದರು!
ಚೋಟಾ ರಾಜನ್ ಆಣತಿಯಂತೆ ರೋಹಿತ್ ತಂಗಪ್ಪನ್ ಅಲಿಯಾಸ್ ಸತೀಶ್ ಕಲ್ಯಾ ಕೊಲೆ ನಡೆಸಿದ್ದಾನೆ. ಆದರೆ ಅವನಿಗೆ ಜ್ಯೋತಿರ್ಮಯಿ ಡೇ ಅವರ ದೈಹಿಕ ವಿವರವನ್ನು ಮಾತ್ರ ನೀಡಿದ್ದ ರಾಜನ್, ಇತರ ಮಾಹಿತಿಯನ್ನು ತಿಳಿಸಿರಲಿಲ್ಲ. ಘಟನೆ ವಿವರ ಟಿ.ವಿ.ಗಳಲ್ಲಿ ಬಿತ್ತರವಾದ ನಂತರವಷ್ಟೇ ಕಲ್ಯಾ ತಂಡಕ್ಕೆ ತಾವು ಕೊಂದಿದ್ದು ಪತ್ರಕರ್ತನನ್ನು ಎಂಬುದು ತಿಳಿದುಬಂದಿತ್ತು - ಹೀಗೆಂದು ಜಂಟಿ ಪೊಲೀಸ್ ಆಯುಕ್ತ ಹಿಮಾಂಶು ರಾಯ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಕಾಲ್ಯಾನಿಗೆ ಛೋಟಾ ರಾಜನ್ನಿಂದ ಜೆ.ಡೇ ಹತ್ಯೆಗೆ 20 ದಿನದ ಮೊದಲು ಫೋನ್ ಬಂದಿದೆ. ಹತ್ಯೆಗೆ ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ರಾಜನ್ ಹೇಳಿದ್ದಾನೆ. ನಂತರ ಕಾಲ್ಯಾ ಚೆಂಬೂರ್ ನಲ್ಲಿ 2 ಲಕ್ಷ ರು, ಬಂದೂಕು ಹಾಗೂ 25 ಸುತ್ತಿನ ಗುಂಡುಗಳನ್ನು ಪಡೆದಿದ್ದಾನೆ. ಇವೆಲ್ಲವೂ ನೈನಿತಾಲ್ನಿಂದ ಬಂದಿವೆ.
ಅಚ್ಚರಿಯ ಸಂಗತಿಯೆಂದರೆ ಹಂತಕರಿಗೆ ತಾವು ಕೊಲ್ಲುತ್ತಿರುವುದು ಒಬ್ಬ ಪತ್ರಕರ್ತನನ್ನು ಎಂಬುದೇ ಗೊತ್ತಿರಲಿಲ್ಲ. ಏಕೆಂದರೆ ಛೋಟಾ ರಾಜನ್ ಯಾರನ್ನು ಕೊಲ್ಲಬೇಕೆಂದು ಹೇಳಿದ್ದನೇ ಹೊರತು ಅವನ ಹಿನ್ನೆಲೆಯ ಬಗ್ಗೆ ಹೇಳಿರಲಿಲ್ಲ. ಮೊದಲೇ ನಿರ್ಧರಿಸಿದ್ದಂತೆ ಕೊಲೆ ಮಾಡಿ ಜೋಗೇಶ್ವರಿಗೆ ತೆರಳಿದಾಗ ಹಂತಕರು ಟೀವಿ ನೋಡಿದ್ದಾರೆ. ಅದರಲ್ಲಿ ಖ್ಯಾತ ಪತ್ರಕರ್ತ ಜೆ.ಡೇ ಹತ್ಯೆಯ ಸುದ್ದಿ ಪ್ರಸಾರವಾಗುತ್ತಿದೆ! ಆಗಲೇ ಇವರಿಗೆ ತಾವು ಕೊಂದಿದ್ದು ಯಾರನ್ನು ಎಂಬುದು ತಿಳಿದಿದೆ. ನಂತರ ಕಾಲ್ಯಾ ರಾಜನ್ಗೆ ಫೋನ್ ಮಾಡಿ ಅಲವತ್ತುಕೊಂಡಿದ್ದಾನೆ. ಆಗ ಆತ ಇನ್ನೂ 3 ಲಕ್ಷ ರೂ. ತೆಗೆದುಕೊಂಡು ಮುಂಬೈನಿಂದ ದೂರ ಹೋಗಿ ತಲೆಮರೆಸಿಕೊಳ್ಳಿ ಎಂದು ಹೇಳಿದ್ದಾನೆ.
ಹಂತಕರಿಂದ ಪೊಲೀಸರು ಕೊಲೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲರನ್ನೂ ಸ್ಥಳೀಯ ನ್ಯಾಯಲಯಕ್ಕೆ ಹಾಜರುಪಡಿಸಿ ಜುಲೈ 4ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.