ಗ್ಯಾಸ್ ಬೆಲೆ ಇಳಿಸಬೇಕಾ, ವೈ ಎಂದರು ಬಿಎಸ್ ವೈ
'ಏರಿದವನು ಇಳಿಯಲೇಬೇಕು ಎಂಬಾ ಮಾತನು ಸಾರುವನು' ಎಂಬ ವಿವೇಕವಾಣಿ ಏರಿದ ಬೆಲೆಗಳಿಗೆ ನಮ್ಮ ದೇಶದಲ್ಲಿ ಅನ್ವಯಿಸುವುದಿಲ್ಲ. ಆದರೂ, ಬಡವರ ಸಂಕಷ್ಟ ನೋಡಿ ಕೆಲ ರಾಜ್ಯಗಳು ಎಲ್ ಪಿಜಿ ಬೆಲೆಯನ್ನು ತುಸು ಇಳಿಸಿದ್ದು, ಬಡವನ ಕಣ್ಣೀರು ಕಪಾಳಕ್ಕಿಳಿಯದಂತೆ ತಡೆದಿವೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 16 ರು.ನಷ್ಟು ಇಳಿಸಿ ಬಡವರ ಮೇಲೆ ಮಮತೆ ತೋರಿದರು. ಕೇರಳ ಸರಕಾರ ಕೂಡ ಈ ಕುರಿತು ಚಿಂತಿಸುತ್ತಿದೆ. ಈಗ ತಾನೂ ಬಡವರ ಪರವಾಗಿದ್ದೇನೆ ಎಂದು ದೆಹಲಿ ಸರಕಾರ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ 40 ರು. ಇಳಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಆದರೆ, ನಮ್ಮ ಕರ್ನಾಟಕ ಸರಕಾರಕ್ಕೇನಾಗಿದೆ? ನಾವು ಬಡವರ ಪರವಾಗಿದ್ದೇವೆ ಎಂದು ಎದೆತಟ್ಟಿ ಹೇಳುವ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರಿಗೇನಾಗಿದೆ? ಆಣೆ ಪ್ರಮಾಣ ಮಾಡುವುದರಿಂದ ಹಿಂದೆ ಸರಿದ ಯಡಿಯೂರಪ್ಪ ದಕ್ಷಿಣ ಕನ್ನಡ ತೀರ್ಥಯಾತ್ರೆಯ ಸಮಯದಲ್ಲಿ, ದೇವರ ಸನ್ನಿಧಿಯಲ್ಲಿ ಹೇಳಿದ್ದೇನು ಗೊತ್ತೆ?
"ನಾವ್ಯಾಕೆ ಬೆಲೆ ಕಡಿಮೆ ಮಾಡಬೇಕು? ಬೇಕಿದ್ದರೆ ಕೇಂದ್ರ ಸರಕಾರವೇ ಬೆಲೆ ಕಡಿಮೆ ಮಾಡಲಿ. ಎಲ್ ಪಿ ಜಿ ಬೆಲೆಯನ್ನು ಏರಿಸಿದ್ದೇ ಕೇಂದ್ರ ಸರಕಾರ" ಎಂದು ಹೇಳುತ್ತ ಪತ್ರಕರ್ತರಿಗೆ ದೊಡ್ಡ ನಮಸ್ಕಾರ ಮಾಡುತ್ತ ಕಾಲುಕಿತ್ತರು. ಇನ್ನು ಉಳಿದದ್ದು ತಿಳಿದುಕೊಳ್ಳುವುದು, ತಿಳಿದುಕೊಳ್ಳದೇ ಇರುವುದು ನಮ್ಮ ಜನರ ವಿವೇಚನೆಗೆ ಬಿಟ್ಟಿದ್ದು.