ಯಡಿಯೂರಪ್ಪ ವಿರುದ್ಧ ಧರ್ಮಸ್ಥಳದಲ್ಲಿ ಸಾರ್ವಜನಿಕರ ಆಕ್ರೋಶ
ಇವರ ಜೊತೆಗೆ ಕೈಜೋಡಿಸಿರುವ ಸಾರ್ವಜನಿಕರು ಕೂಡ ಯಡಿಯೂರಪ್ಪನವರ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಈ ವಿವಿಐಪಿಗಳ ಆಗಮನದಿಂದ ಭಾರೀ ಸಂಖ್ಯೆಯಲ್ಲಿ ಸೇರಿರುವ ಭಕ್ತಾದಿಗಳಿಗೆ ಸಹಜವಾಗಿ ತೊಂದರೆಯಾಗಿದೆ. ಸುಮಾರು 9ಗಂಟೆಯಿಂದ 12ರವರೆಗೆ ಭಕ್ತಾದಿಗಳಿಗೆ ನಿರ್ಬಂಧ ಹೇರಲಾಗಿದೆ.
ರಾಜಕೀಯ ಗೊಂದಲಗಳನ್ನು ದೇವಸ್ಥಾನದೊಳಗೆ ತಂದಿರುವ ಯಡಿಯೂರಪ್ಪನವರು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬುದು ಸಾರ್ವಜನಿಕರ ಆಕ್ರೋಶ. ಹೀಗಾಗಿ ಅವರನ್ನು ದೇವಸ್ಥಾನದೊಳಗೆ ಪ್ರವೇಶಿಸಲು ಬಿಡಬಾರದು ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.
ಅವರಲ್ಲಿ ಆತ್ಮವಿಶ್ವಾಸವಿದ್ದರೆ, ತಪ್ಪು ಮಾಡಿಲ್ಲ ಎಂಬ ನಂಬಿಕೆ ಇದ್ದಿದ್ದರೆ ಇಂದು ಆಣೆ ಪ್ರಮಾಣ ಮಾಡಬೇಕಾಗಿತ್ತು. ಆಣೆ ಮಾಡದೆ ಹೇಡಿಯಂತೆ ವರ್ತಿಸುತ್ತಿದ್ದಾರೆ. ದೇವರಿಗೇ ಅಪಚಾರ ಮಾಡಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದೂರದೂರದಿಂದ ಬಂದಿದ್ದರೂ ದೇವಸ್ಥಾನದೊಳಗೆ ಬಿಡಲು ನಿರಾಕರಿಸುತ್ತಿರುವುದು ಅನ್ಯಾಯ ಎಂದು ಕೂಗುತ್ತಿದ್ದರು.
ಧೋಧೋ ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಿ ಕೊಡೆ ಹಿಡಿದು ಸಾಲುಗಟ್ಟಿ ನಿಂತಿರುವ ಸಾವಿರಾರು ಭಕ್ತಾದಿಗಳಿಗೆ ಮಂಜುನಾಥನ ದರ್ಶನ ಇಂದು ಸುಲಭವಾಗಿ ಸಿಗಲಾರದು. ಬೆಳಗಿನ ಜಾವ ಕನಿಷ್ಠಪಕ್ಷ 3ರಿಂದ 4 ಗಂಟೆ ಕಾಯದೆ ಬೇರೆ ವಿಧಿಯಿಲ್ಲ. 10 ಗಂಟೆಗೆ ಬರಬೇಕಾಗಿದ್ದ ಯಡಿಯೂರಪ್ಪ 9 ಗಂಟೆಗೇ ಸುಮಾರು 35 ಶಾಸಕರು, ಕಾರ್ಯಕರ್ತರನ್ನು ಕರೆದುಕೊಂಡು ಬಂದಿದ್ದಾರೆ.