ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ : ಯಡಿಯೂರಪ್ಪ
ಡೀಸೆಲ್ ಬೆಲೆ ಏರಿಸಿರುವುದರಿಂದ ಬಸ್ ಪ್ರಯಾಣ ದರ ಏರುವುದು ಸಹಜ. ಬೇರೆ ದಾರಿಯೇ ಇಲ್ಲ. ಕೇಂದ್ರದ ಈ ನಿರ್ಧಾರದಿಂದ ರಾಜ್ಯಕ್ಕೆ ನಷ್ಟವಾಗುತ್ತದೆ. ಸಾರಿಗೆ ಇಲಾಖೆಗೆ ಆಗುವ ನಷ್ಟವನ್ನು ತಪ್ಪಿಸಲು ಬಸ್ ಪ್ರಯಾಣ ದರವನ್ನು ಏರಿಸುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ಕೆಎಸ್ಆರ್ ಟಿಸಿ ದರಗಳನ್ನು ಶೇ.7ರಿಂದ 8ರಷ್ಟು ಮತ್ತು ಬೆಂಗಳೂರಿನಲ್ಲಿ ಬಿಎಂಟಿಸಿ ದರಗಳನ್ನು ಪ್ರತಿ ಸ್ಟೇಜಿಗೆ 1ರಿಂದ 2 ರು. ಮತ್ತು ಮಾಸಿಕ ಪಾಸ್ ದರವನ್ನೂ ಹೆಚ್ಚಿಸಲಾಗುವುದು ಎನ್ನಲಾಗಿದೆ. ಸಾರಿಗೆ ಸಚಿವ ಆರ್ ಅಶೋಕ್ ಅವರ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಇಂದು ಸಂಜೆ ಬೆಲೆ ಏರಿಕೆಯ ಪ್ರಮಾಣ ತಿಳಿಯಲಿದೆ.
ರಾಜ್ಯಾದ್ಯಂತ ಪ್ರತಿಭಟನೆ : ಅಡುಗೆ ಎಲ್ ಪಿ ಜಿ, ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆಗಳನ್ನು ಭಾರೀ ಪ್ರಮಾಣದಲ್ಲಿ ಏರಿಸಿರುವುದನ್ನು ವಿರೋಧಿಸಿ ಬೆಳಗಾವಿಯ ನಾಗರಿಕರು ರಸ್ತೆಯ ಮೇಲೆ ಸೌದೆ ಉರಿಸಿ ಅಡುಗೆ ಮಾಡಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಹೀಗಾದರೆ ಜನಸಾಮಾನ್ಯರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಬೆಲೆ ಏರಿಕೆಯನ್ನು ಕೂಡಲೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಬಿಜಾಪುರ, ಕೋಲಾರ, ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಶಿವಮೊಗ್ಗದಲ್ಲಿಯೂ ನಾಗರಿಕರು ಬೆಲೆ ಏರಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಕೋಲಾರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಬೆಲೆ ಏರಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.