ಚಿತ್ರದುರ್ಗ: ಒಂಟಿ ಮಹಿಳೆ ಕೊಲೆ, 2 ಲಕ್ಷ ಅಭರಣ ಅಪಹರಣ
ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದ ಬಸ್ ಏಜೆಂಟ್ ರಂಗನಾಥ್ ಅವರ ಪತ್ನಿ ಅನ್ನಪೂರ್ಣಮ್ಮ(48) ಹತ್ಯೆಗೀಡಾದ ನತದೃಷ್ಟೆ. ಬಸ್ ಏಜೆಂಟ್ ಆಗಿರುವ ರಂಗನಾಥ್, ಬಡ್ಡಿ ವ್ಯವಹಾರವನ್ನು ನಡೆಸುತ್ತಿದ್ದಾರೆ. ಕೆಲಸದ ಮೇಲೆ ಹೊಸದುರ್ಗಕ್ಕೆ ಹೋಗಿದ್ದರು. ಮನೆಯಲ್ಲಿ ಅನ್ನಪೂರ್ಣಮ್ಮ ಒಬ್ಬರೇ ಇದ್ದ ವೇಳೆ ದುಷ್ಕರ್ಮಿಗಳು ಎಂಟ್ರಿ ಕೊಟ್ಟಿದ್ದಾರೆ. ಯಾರು ಏನು ಎಂದು ಈಕೆ ವಿಚಾರಿಸುವಷ್ಟರಲ್ಲಿ ಅನ್ನಪೂರ್ಣಮ್ಮ ಅವರ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿಹಾಕಿದ್ದಾರೆ.
ಮನೆಯಲ್ಲಿ ಇಟ್ಟಿದ್ದ ಆಭರಣಗಳನ್ನು ದೋಚಿದ ಮೇಲೆ ಆಕೆ ಕುತ್ತಿಗೆ ಬಿಗಿದು ಸಾಯಿಸಿ, ಮಾಂಗಲ್ಯ ಸರ, ಬಳೆ ಕಿತ್ತುಕೊಂಡು ಪರಾರಿಯಾಗಿದ್ದಾರೆ. ರಾತ್ರಿ ತಡವಾಗಿ ಮನೆಗೆ ಬಂದ ರಂಗನಾಥ್, ಪತ್ನಿ ಕೊಲೆಯಾಗಿರುವುದನ್ನು ಕಂಡು ದಿಗ್ಭ್ರಾಂತನಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಊರ ಮಧ್ಯದಲ್ಲಿರುವ ರಂಗನಾಥ್ ಮನೆಯಲ್ಲಿ ನಡೆದಿರುವ ಈ ಕೊಲೆಯಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಬಡ್ಡಿ ವ್ಯವಹಾರ ಅನ್ನಪೂರ್ಣಮ್ಮ ಅವರನ್ನು ಬಲಿ ತೆಗೆದುಕೊಂಡಿತೇ ಎಂಬ ಪ್ರಶ್ನೆಯೊಂದಿಗೆ ಹೊಸದುರ್ಗ ಪೊಲೀಸರು ದುಷ್ಕರ್ಮಿಗಳಿಗೆ ಬಲೆ ಬೀಳಿಸಿದ್ದಾರೆ.