ಧರ್ಮಸ್ಥಳದಲ್ಲಿ ಆಣೆ: ದೂತರಾಗಿ ಈಶ್ವರಪ್ಪ, ಶೋಭಾ ಪ್ರತ್ಯಕ್ಷ
'ಈ ಆಣೆ ಪ್ರಮಾಣ ಎಲ್ಲಾ ವೈಯಕ್ತಿಕ ದ್ವೇಷ ದಿಂದ ಆಗುತ್ತಿದೆ. ನಮ್ಮ ಪಕ್ಷ ರಾಜಿ ಸಂಧಾನ ಮಾಡುವುದಕ್ಕೆ ಲೆಹರ್ಸಿಂಗ್ ಅವರಿಗೆ ಜಿಪಿಎ ನೀಡಿಲ್ಲ. ಜನರಿಂದ ದೂರವಾಗಿರುವ ಪಕ್ಷದ ಜೊತೆ ನಾವೇಕೆ ಮಾತನಾಡೋಣ. ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಸಂಪೂರ್ಣ ಬೆಂಬಲವಿದೆ. ಅಣೆ ಮಾಡಲು ಇಬ್ಬರು ಒಪ್ಪಿದ್ದಾರೆ. ಈ ಬಗ್ಗೆ ವೀರೇಂದ್ರ ಹೆಗ್ಗಡೆ ಅವರೊಡನೆ ಮಾತಾಡಿದ್ದೇವೆ. ಮುಂದೇನಾಗುತ್ತದೆಯೋ ಕಾದು ನೋಡಿ'ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಸಿಎಂ ಹಾಗೂ ಮಾಜಿ ಸಿಎಂ ಅವರ ಪಂಥಾಹ್ವಾನ ಮಂಜುನಾಥನ ಸನ್ನಿಧಿಯವರೆಗೂ ಬಂದಿರುವುದು ಮಾಧ್ಯಮಗಳ ಮೂಲಕ ತಿಳಿಯಿತು. ಕ್ಷೇತ್ರದ ಹೆಸರನ್ನು, ವೈಯಕ್ತಿಕ ದ್ವೇಷಕ್ಕಾಗಿ ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದರು. ಈಗ ಸಚಿವೆ ಶೋಭಾ ಹಾಗೂ ಈಶ್ವರಪ್ಪ ಅವರ ಭೇಟಿ ನಂತರ ಪ್ರತಿಕ್ರಿಯೆ ಇನ್ನೂ ನೀಡಿಲ್ಲ.
ಧರ್ಮಸ್ಥಳ ಮಂಜುನಾಥನೇ ಸಾಕ್ಷಿ ಎಂದು ದೇವರ ಮೇಲೆ ಆಣೆ ಮಾಡಲು ಕುಮಾರಸ್ವಾಮಿ ಅವರು ಮಹೂರ್ತ ಫಿಕ್ಸ್ ಮಾಡಿದ ಮೇಲೆ, ರಾಜಕಾರಣಿಗಳ ಆಣೆ ಪ್ರಮಾಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗಳು ನಡೆದಿದೆ. ಜೂ 27ರಂದು ಧರ್ಮಸ್ಥಳದಲ್ಲಿ ಕುಟುಂಬ ಸಮೇತ ಬಂದು ಆಣೆ ಮಾಡುವುದಾಗಿ ಯಡಿಯೂರಪ್ಪ ಅವರು ತಮ್ಮ ರಾಜಕೀಯ ಕಾರ್ಯದರ್ಶಿ ಬಿಜೆ ಪುಟ್ಟಸ್ವಾಮಿ ಹಾಗೂ ಆಪ್ತ ಸಚಿವ ಸಮೂಹದ ಮೂಲಕ ಹೇಳಿಸಿದ್ದರು.