ಹೆಂಡತಿಯನ್ನೇ ತ್ಯಾಗ ಮಾಡಿದ ನಿತೀಶ್ ತ್ಯಾಗಿ ಕಥೆ
ಮೀರತ್ ನಲ್ಲಿ ನಡೆದ ಘಟನೆ ಥೇಟ್ ಸಿನಿಮಾದಂತ್ತಿದೆ. ಅವಳ ಹೆಸರು ಆರತಿ. ಆಕೆಯ ಅಕ್ಕನ ಮದುವೆಯ ಖುಷಿಯಲ್ಲಿದ್ದವಳು. ಆದರೆ ಮದುವೆಯಂದೇ ಆಕೆಯ ಅಕ್ಕ ತಾನು ಪ್ರೀತಿಸಿದಾತನೊಂದಿಗೆ ಓಡಿಹೋಗಿದ್ದಳು. ಆದರೆ ಮರ್ಯಾದೆ ಉಳಿಸಲು ಆಕೆಯ ತಂದೆ ತಂಗಿ ಆರತಿಯನ್ನೇ ಉದ್ಯಮಿ ನಿತೀಶ್ ತ್ಯಾಗಿಗೆ ಮದುವೆ ಮಾಡಿಕೊಟ್ಟ.
ಮದುವೆ ಮುಗಿದು ಮನೆಗೆ ಬಂದ ಪತ್ನಿ ನಿತೀಶ್ ನಲ್ಲಿ ತನಗೆ ವಿನೀತ್ ಎಂಬಾತನೊಂದಿಗೆ ಲವ್ ಇರುವುದಾಗಿ ತಿಳಿಸಿದ್ದಾಳೆ. "ಆತನೊಂದಿಗೆ ಈ ಹಿಂದೆಯೇ ದೇವಸ್ಥಾನದಲ್ಲಿ ಮದುವೆಯಾಗಿದೆ. ನನ್ನ ಇಷ್ಟಕ್ಕೆ ವಿರುದ್ಧವಾಗಿ ಈ ಮದುವೆ ಅನಿರೀಕ್ಷಿತವಾಗಿ ನಡೆದಿದೆ. ದಯವಿಟ್ಟು ಆತನೊಂದಿಗೆ ಬದುಕಲು ಅವಕಾಶ ಮಾಡಿಕೊಡಿ" ಎಂದು ಪತಿಯ ಕಾಲಿಡಿದು ಬೇಡಿಕೊಂಡಿದ್ದಾಳೆ.
ನಿತೀಶ್ ಆಕೆಯ ಅಕ್ಕನನ್ನು ಮದುವೆಯಾಗಬೇಕೆಂದುಕೊಂಡಿದ್ದ. ಅಕ್ಕ ಸಿಗಲಿಲ್ಲ. ಸರಿ ತಂಗಿಯಾದರೂ ಸಿಕ್ಕಲಲ್ಲ ಎಂದು ಮದುವೆಗೆ ಒಪ್ಪಿಕೊಂಡಿದ್ದ. ಆದರೆ ಆಕೆಯ ಕತೆ ಹೀಗೆ. ಆದರೂ ಪ್ರೀತಿಸಿದವರನ್ನು ದೂರ ಮಾಡಲು ಆತನ ಮನಸ್ಸು ಒಪ್ಪಲಿಲ್ಲ. ಹೆಸರಿಗೆ ತಕ್ಕಂತೆ ನಿತೀಶ್ ತ್ಯಾಗಿಯಾದ.
ತಾನೇ ಮುಂದೆ ನಿಂತು ಅವರಿಬ್ಬರನ್ನು ಒಂದುಗೂಡಿಸಿದ. ಇವಳು ನನಗೆ ತಂಗಿಯಂತೆ ಎಂದ. ತನ್ನ ಮಗನ ತ್ಯಾಗದ ಕುರಿತು ನಿತೀಶ್ ತಂದೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬದವರೆಲ್ಲ ಆಕೆಯನ್ನು ಮಗಳಂತೆ ಭಾವಿಸಿದ್ದೇವೆ: ಎಂದು ನಿತೀಶ್ ತಂದೆ ಹೇಳಿದ್ದಾರೆ.
ಆದರೆ ಈ ಘಟನೆ ಆರತಿಯ ತಂದೆಗೆ ಇಷ್ಟವಾಗಲಿಲ್ಲ. "ನನಗೆ ತಂದೆ ಕಿರುಕುಳ ಕೊಡುತ್ತಿದ್ದಾರೆ. ನಿತೀಶ್ ಕುಟುಂಬವನ್ನು ವರದಕ್ಷಿಣೆ ಕಿರುಕುಳದ ಆರೋಪವನ್ನು ಸಿಲುಕಿಸುವುದಾಗಿ ಬೆದರಿಸುತ್ತಿದ್ದಾರೆ" ಎಂದು ಆರತಿ ಹೇಳಿದ್ದಾಳೆ.
ನನಗೆ ತಂದೆಯಿಂದ ರಕ್ಷಣೆ ಕೊಡಿ ಎಂದು ಇದೀಗ ಆರತಿ ಪೊಲೀಸರ ಮೊರೆ ಹೋಗಿದ್ದಾಳೆ. ಇದನ್ನು ಮೀರತ್ ನಗರ ಪೊಲೀಸ್ ಆಯುಕ್ತ ಪ್ರಬಾಲ್ ಪ್ರತಾಪ್ ಸಿಂಗ್ ದೃಢೀಕರಿಸಿದ್ದಾರೆ.
ಅಕ್ಕನ ಮದುವೆಯಾಗಲು ಹೋಗಿ ತಂಗಿಯನ್ನು ಮದುವೆಯಾದ ನಿತೀಶ್ ಕೊನೆಗೆ ಆಕೆಯನ್ನು ತಂಗಿಯಾಗಿ ಸ್ವೀಕರಿಸಿದ. ಆತನ ತಂದೆ ಕೂಡ ಈಕೆಯನ್ನು ಮಗಳು ಎಂದು ಕರೆದ. ಆದರೆ ಆಕೆಯ ನಿಜವಾದ ತಂದೆ ಮಾತ್ರ ಆಕೆಯ ಪಾಲಿಗೆ ವಿಲನ್ ಆಗಿದ್ದಾನೆ. (ಕೃಪೆ: ಮಿಡ್ ಡೇ)