ಯುನೆಸ್ಕೋ ಹಣೆಪಟ್ಟಿ ಬೇಡ; ಅರಣ್ಯ ಮಾರಾಟಕ್ಕಿದೆ
ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅರಣ್ಯ ಸಚಿವ ಸಿ.ಎಚ್.ವಿಜಯ್ಶಂಕರ್, ಯುನೆಸ್ಕೊ ಪಟ್ಟಿಯಲ್ಲಿ ರಾಜ್ಯದ ಪುಷ್ಪಗಿರಿ ವನ್ಯಜೀವಿ ಧಾಮ, ಬ್ರಹ್ಮಗಿರಿ ವನ್ಯ ಜೀವಿ ಧಾಮ, ತಲಕಾವೇರಿ ವನ್ಯಜೀವಿ ಧಾಮ, ಪಡಿನಲಕ್ನಾಡ್ ಸಂರಕ್ಷಿತ ಅರಣ್ಯ, ಕೇರ್ತಿ ಸಂರಕ್ಷಿತ ಅರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಧಾಮ, ಸೋಮೇಶ್ವರ ಸಂರಕ್ಷಿತ ಅರಣ್ಯ, ಆಗುಂಬೆ ಸಂರಕ್ಷಿತ ಅರಣ್ಯ, ಬಾಲಹಳ್ಳಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಪಾರಂಪರಿಕ ತಾಣಗಳನ್ನಾಗಿ ಗುರುತಿಸಲಾಗಿದೆ ಎಂದರು.
ಪಾರಂಪರಿಕ ತಾಣಗಳನ್ನಾಗಿ ಗುರುತಿಸಿಕೊಳ್ಳುವ ಸ್ಥಳಗಳಲ್ಲಿ ಯಾವುದೇ ಬಗೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾದರೂ ಯುನೆಸ್ಕೊ ಅನುಮತಿ ಪಡೆಯಬೇಕಾಗುತ್ತದೆ. ಆದ್ದರಿಂದ, ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಅಭಿಪ್ರಾಯದಂತೆ ಕೇಂದ್ರ ಸರಕಾರ ಯುನೆಸ್ಕೊಗೆ ರವಾನಿಸಲಿರುವ ಪಟ್ಟಿಯಿಂದ ರಾಜ್ಯದ ಈ 10 ಸ್ಥಳಗಳ ಹೆಸರನ್ನು ಕೈ ಬಿಡುವಂತೆ ಮನವಿ ಸಲ್ಲಿಸಲಾಗುವುದು ಎಂದು ವಿಜಯಶಂಕರ್ ತಿಳಿಸಿದರು.
ವಿಶ್ವ ಪಾರಂಪರಿಕ ತಾಣಗಳನ್ನಾಗಿ ಗುರುತಿಸಿಕೊಳ್ಳುವ ಸ್ಥಳಗಳಿಗೆ ಯಾವುದೇ ವಿಶೇಷ ಕಾನೂನುಗಳು ಅನ್ವಯಿಸುವುದಿಲ್ಲ. ಅಲ್ಲದೆ, ಯಾವುದೇ ವಿಶೇಷ ಅನುದಾನವೂ ಲಭ್ಯವಾಗುವುದಿಲ್ಲ. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಪ್ರಸ್ತುತ ಜಾರಿಯಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಅರಣ್ಯ ಕಾನೂನುಗಳೇ ಪ್ರಬಲ ವಾಗಿವೆ. ಈ ಹಿನ್ನೆಲೆಯಲ್ಲಿ ಈ ಸ್ಥಳಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.